ಬೆಂಗಳೂರು: ‘ವಿಶ್ವವಿದ್ಯಾಲಯಗಳಲ್ಲಿ ತುಕಡೆ–ತುಕಡೆ (ದೇಶವನ್ನು ಒಡೆಯುವ) ಸಂಸ್ಕೃತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯವು (ಬಿಸಿಯು) ಗುರುವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿ, ‘ದೇಶವನ್ನು ಒಡೆಯುವ ಮಾತನಾಡುವವರನ್ನು ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಮಾಧ್ಯಮಗಳಲ್ಲಿಯೂ ಇಂತಹ ಹೇಳಿಕೆಗಳು ಪ್ರಚಾರ ಪಡೆಯುತ್ತವೆ’ ಎಂದರು.
‘ದೇಶದ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುವವರಿಗೆ ವಿದ್ಯಾರ್ಥಿಗಳು ಎನ್ನಬೇಕೇ? ಇಂಥವರಿಗೆ ಯಾವ ರೀತಿಯ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ’ ಎಂದು ಪ್ರಶ್ನಿಸಿದರು.
‘ವಿಶ್ವವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ಉಗ್ರಗಾಮಿಗಳು ಮತ್ತು ಸಮಾಜವಿದ್ರೋಹಿಗಳು ಮಾತ್ರ ಇಂತಹ ಕಾರ್ಯದಲ್ಲಿ ತೊಡಗಲು ಸಾಧ್ಯ. ಬಹುಸಂಖ್ಯಾತರು ಮೌನವಾಗಿ ಮನೆಯಲ್ಲಿ ಇರುವವರೆಗೆ ಇಂತಹ ಕೃತ್ಯಗಳನ್ನು ಇಂಥವರು ಮುಂದುವರಿಸುತ್ತಲೇ ಇರುತ್ತಾರೆ’ ಎಂದು ಅವರು ಹೇಳಿದರು.
‘ದೇಶದಲ್ಲಿ ವಂಶ ರಾಜಕಾರಣ ಹೆಚ್ಚಾಗುತ್ತಿದೆ. ಅಧಿಕಾರ ಎನ್ನುವುದು ತಮ್ಮ ಪೂರ್ವಜರ ಆಸ್ತಿ ಎಂದು ಹಲವು ರಾಜಕಾರಣಿಗಳು ತಿಳಿದುಕೊಂಡಿದ್ದಾರೆ. ತಮ್ಮ ನಂತರ ಮಕ್ಕಳು, ಮೊಮ್ಮಕ್ಕಳನ್ನು ಅಧಿಕಾರಕ್ಕೆ ತರುತ್ತಿದ್ದಾರೆ’ ಎಂದೂ ಅವರು ಟೀಕಿಸಿದರು.
ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಎನ್. ನರಸಿಂಹಮೂರ್ತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.