ಬೆಂಗಳೂರು: ತುಮಕೂರಿನಲ್ಲಿ ಸಿದ್ಧಗಂಗಾ ಶ್ರೀಗಳು ಹಾಗೂ ಉಡುಪಿಯಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ಸ್ಮೃತಿವನ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕರ್ನಾಟಕ ಜೀವವೈವಿಧ್ಯ ಮಂಡಳಿ ಹಮ್ಮಿಕೊಂಡಿರುವ ‘ಜೀವವೈವಿಧ್ಯ ಜಾಗೃತಿ ಅಭಿಯಾನ’ಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ನಾಡಿನ ಕೆರೆ, ನದಿ, ಕಣಿವೆಗಳು ಸೇರಿದಂತೆ ನಿಸರ್ಗ ಸಂಪತ್ತುಗಳ ಸಂರಕ್ಷಣೆಗೆ ಸ್ಥಳೀಯ ಜನರೇ ಮುಂದಾಗಬೇಕು’ ಎಂದರು.
‘ನೈಸರ್ಗಿಕ ಸಂಪತ್ತುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮಂಡಳಿಯು ರಚನಾತ್ಮಕ ಆಂದೋಲನವನ್ನು ಕೈಗೆತ್ತಿಕೊಂಡಿದೆ. ನಮ್ಮ ಸರ್ಕಾರವು ಬಜೆಟ್ನಲ್ಲಿ ನವೀನ ಪರಿಸರ-ಅರಣ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿಸಿದೆ ’ ಎಂದು ಹೇಳಿದರು.
ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ಈ ಅಭಿಯಾನವು ಆ.15ರ ವರೆಗೆ ರಾಜ್ಯದೆಲ್ಲೆಡೆ ನಡೆಯಲಿದೆ. ರಾಜ್ಯದಲ್ಲಿನ ಪಂಚಾಯತಿ, ನಗರ ಸಂಸ್ಥೆಗಳಲ್ಲಿ ರಚಿತಗೊಂಡಿರುವ ಜೀವವೈವಿಧ್ಯ ಸಮಿತಿಗಳು ಸಕ್ರಿಯವಾಗಬೇಕು. ಸ್ಥಾನಿಕವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿನ ನಿಸರ್ಗ ಸಂಪತ್ತಿನ ಪರಿಸ್ಥಿತಿಯ ಅವಲೋಕನವಾಗಬೇಕು. ಕೆರೆಗಳು ಹಾಗೂ ವನಗಳ ಪುನಶ್ಚೇತನ ಕಾರ್ಯಗಳಲ್ಲಿ ಜನತೆ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಅಭಿಯಾನ ರೂಪಿಸಲಾಗಿದೆ’ ಎಂದು ಹೇಳಿದರು.
‘ಹಾಸನದ ಗೆಂಡೆಕಟ್ಟೆಯಲ್ಲಿ ಜೀವವೈವಿಧ್ಯ ವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. 5 ಜಿಲ್ಲೆಗಳಲ್ಲಿ ರಕ್ತಚಂದನ, ಶ್ರೀಗಂಧ, ಸೀತಾ ಅಶೋಕ ಸೇರಿದಂತೆ ವಿನಾಶದ ಅಂಚಿನ ಸಸ್ಯಗಳ ವನಗಳ ನಿರ್ಮಾಣ ಮತ್ತು ಪುನಶ್ಚೇತನ ಯೋಜನೆಗೆ ಚಾಲನೆ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.