ADVERTISEMENT

ಪುಕ್ಸಟ್ಟೆ ಗ್ಯಾರಂಟಿಗಳಿಗೆ ಕನ್ನಡಿಗರು ತಲೆಬಾಗುವವರಲ್ಲ: ರಾಹುಲ್‌ಗೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 14:28 IST
Last Updated 20 ಮಾರ್ಚ್ 2023, 14:28 IST
   

ಬೆಂಗಳೂರು: ರಾಜ್ಯದ ನಿರುದ್ಯೋಗಿ ಪದವೀಧರರಿಗೆ ₹3,000 ಹಾಗೂ ಡಿ‍ಪ್ಲೊಮಾ ಪದವೀಧರರಿಗೆ ₹1,500 ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳವರೆಗೆ, ಪ್ರತಿ ತಿಂಗಳು ನೀಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದು, ಈ ಕುರಿತಂತೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.

ಲೂಟಿಗಾಗಿ ರಾಜ್ಯವನ್ನು ಎಟಿಎಂ ಮಷಿನ್ ಮಾಡಿಕೊಳ್ಳಲು ಆಗಮಿಸಿರುವ ರಾಹುಲ್ ಗಾಂಧಿಯವರೇ, ಸುಳ್ಳು ಪುಕ್ಸಟ್ಟೆ ಗ್ಯಾರಂಟಿಗಳನ್ನು ಕೊಟ್ಟು ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದ ಜನರನ್ನು ವಂಚಿಸಿರುವುದು ಕರ್ನಾಟಕದ ಜನತೆಗೆ ತಿಳಿದಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಕನ್ನಡಿಗರು ಸ್ವಾಭಿಮಾನಿಗಳು ನಿಮ್ಮ ಪುಕ್ಸಟ್ಟೆ ಗ್ಯಾರಂಟಿಗಳಿಗೆ ತಲೆ ಬಾಗುವವರಲ್ಲ. ರಾಜ್ಯಕ್ಕೆ ಬಂದು ಜನರ ಕಿವಿ ಮೇಲೆ ಲಾಲ್‌ಬಾಗ್ ಇಡುವ ನಿಮ್ಮ ಪ್ರಯತ್ನಕ್ಕೆ ಜನತೆಯೇ ಉತ್ತರ ಕೊಡಲಿದ್ದಾರೆ ಕಾದು ನೋಡಿ ಎಂದು ಟೀಕಿಸಿದೆ.

ವಿದೇಶಿ ನೆಲದಲ್ಲಿ ಕೂತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ರಾಹುಲ್‌ ಗಾಂಧಿಯವರನ್ನು ದೇಶದ್ರೋಹಿ ಎನ್ನದೆ ಮತ್ತೇನೆಂದು ಕರೆಯಬೇಕು. ಕುಂಬಳಕಾಯಿ ಕಳ್ಳ ಎಂದರೆ ರಾಹುಲ್ ಗಾಂಧಿಯವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ?

ADVERTISEMENT

ಜನರಿಗೆ ₹500 ಹಣ, ಎಣ್ಣೆ ಕೊಟ್ಟು ಕರೆತರುವ ಮಟ್ಟಿಗೆ ಕಾಂಗ್ರೆಸ್ ನೆಲಕಚ್ಚಿದೆ ಎಂದು ಟೀಕಿಸಿರುವ ಬಿಜೆಪಿ, ವಿಡಿಯೊವೊಂದನ್ನು ಹಂಚಿಕೊಂಡಿದೆ.

ಭಾರತವನ್ನು ಒಳಗಿನಿಂದಲೇ ಟೊಳ್ಳುಗೊಳಿಸಿ ದೇಶ ಒಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಈ ದುರುದ್ದೇಶಕ್ಕಾಗಿ ಸೊರೋಸ್‌ನಂತಹ ದುಷ್ಟ ಶಕ್ತಿಗಳೊಂದಿಗೆ ಸೇರಿ ರಾಹುಲ್ ಗಾಂಧಿಯವರು
ಅವರು ವಿದೇಶೀ ಕೈಗೊಂಬೆ ಆಗಿದ್ದಾರೆ. ಇನ್ನು ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಾಗಷ್ಟೇ ಉಳಿದಿಲ್ಲ, ಬದಲಾಗಿ ಟುಕ್ಡೆ ಟುಕ್ಡೆ ಗ್ಯಾಂಗ್‌ನ ಲೀಡರ್ ಆಗಿದೆ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.