ಹಾವೇರಿ: ‘ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲೂ ‘ಕಮಲ’ ಅರಳಿದಂತಾಗಿದೆ. ಹಾಗಾಗಿ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಯಿತು’ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಹೇಳಿದರು.
ರಾಜ್ಯ ಮತ್ತು ರಾಷ್ಟ್ರ ‘ಕಾಂಗ್ರೆಸ್ ಮುಕ್ತ’ವಾಗುತ್ತದೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಮುನ್ಸೂಚನೆಯಾಗಿದೆ. ಮತದಾರರು ‘ಅನರ್ಹತೆ’ ಕಿತ್ತು ಹಾಕಿ ಜನತಾ ನ್ಯಾಯಾಲಯದಲ್ಲಿ ‘ಅರ್ಹ’ರನ್ನಾಗಿ ಮಾಡಿದ್ದಾರೆ. ಯು.ಬಿ. ಬಣಕಾರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತು ಕೊಟ್ಟ ಹಾಗೆ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡಿ ಗೆಲುವಿಗೆ ಶ್ರಮಿಸಿದ್ದಾರೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಪರ್ವ ಮಾಡಲು ಶಪಥ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹಣದ ಆಮಿಷದಿಂದ ಎದುರಾಳಿ ಗೆದ್ದಿದ್ದಾರೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ ಆರೋಪಕ್ಕೆ, ‘ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತಿದೆ ಅವರ ಹೇಳಿಕೆ ಎಂದು ತಿರುಗೇಟು ನೀಡಿದರು.
‘ಫೈವ್ ಸ್ಟಾರ್ ಪಾಟೀಲ!’
ಹಾವೇರಿ: ಬಿ.ಸಿ.ಪಾಟೀಲ ಅವರ ಶುಭ ಸಂಖ್ಯೆ 5. ದೊಡ್ಡ ಯಶಸ್ಸು ತಂದುಕೊಟ್ಟ ‘ಕೌರವ’ ಅವರ 5ನೇ ಚಿತ್ರ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯು.ಬಿ.ಬಣಕಾರ ವಿರುದ್ಧ ಗೆದ್ದ ಮತಗಳ ಅಂತರ ‘555’.
ಶಾಸಕತ್ವಕ್ಕೆ ರಾಜೀನಾಮೆ ನೀಡಿ 5 ತಿಂಗಳು. ಅವರು ಸ್ಪರ್ಧಿಸಿದ ಚುನಾವಣೆಗಳ ಸಂಖ್ಯೆ 5. ಈ ಬಾರಿ ಮತದಾನ ನಡೆದದ್ದು ಡಿ.5ರಂದು. ಸಂಖ್ಯೆ 5 ನನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದು ಬಿ.ಸಿ.ಪಾಟೀಲರ ಮನದಾಳದ ಮಾತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.