ಬೆಂಗಳೂರು: ಖುತುಬ್–ಎ– ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ (ಮೇ 2) ರಾಜ್ಯದಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಹಿಂದೆ ಪ್ರಕಟಿಸಿದ್ದ ರಜಾ ದಿನಗಳ ಪಟ್ಟಿಯಲ್ಲಿ ಮೇ3 ರಂದು ರಂಜಾನ್ ಹಾಗೂ ಬಸವ ಜಯಂತಿಗೆ ರಜೆ ಘೋಷಿಸಲಾಗಿತ್ತು. ಆದರೆ, ‘ಮೂನ್ ಕಮಿಟಿ’ ನಿರ್ಧರಿಸಿರುವುದರಿಂದ ಮೇ 2ರಂದು ರಜೆ ಘೋಷಿಸಲಾಗಿದೆ ಎಂದು ಸರ್ಕಾರದ ಆದೇಶ ಹೇಳಿದೆ. ಮಂಗಳವಾರ ಬಸವ ಜಯಂತಿ ರಜೆ ಇದೆ.
‘ಹಬ್ಬದ ದಿನ ಖಚಿತವಾಗಿಲ್ಲ’: ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸ ಅದಿ,‘ಶನಿವಾರ ‘ಮೂನ್ ಕಮಿಟಿ’ ಸಭೆ ಸೇರಲು ಅವಕಾಶವಿಲ್ಲ. ಭಾನುವಾರ ಮೂನ್ ಕಮಿಟಿ ಸಭೆ ನಡೆಯಲಿದೆ. ಭಾನುವಾರ ಚಂದ್ರದರ್ಶನವಾದರೆ ಸೋಮವಾರ ಈದ್ ಆಚರಣೆ ನಡೆಯಲಿದೆ. ಭಾನುವಾರ ಚಂದ್ರದರ್ಶನ ಆಗದಿದ್ದರೆ ಮಂಗಳವಾರ ಈದ್ ಆಚರಣೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.
‘ಇಸ್ಲಾಮಿನ ಷರಿಯತ್ ಪ್ರಕಾರ, ಚಂದ್ರ ದರ್ಶನ ಮಾಡಿ ಉಪವಾಸ ಆರಂಭಿಸಿ, ಮತ್ತೊಂದು ಚಂದ್ರ ದರ್ಶನದ ಬಳಿಕ ಈದ್ ಆಚರಿಸಬೇಕು. ಉಪವಾಸ ಆರಂಭಿಸಿದ ದಿನದಿಂದ 29ನೇ ರಾತ್ರಿ ಚಂದ್ರದರ್ಶನ ಆಗದೇ ಇದ್ದರೆ 30 ದಿನಗಳ ಉಪವಾಸ ಮುಗಿಸಿ, 31ನೇ ದಿನ ಹಬ್ಬ ಆಚರಿಸಬೇಕು. ಶನಿವಾರ ತೀರ್ಮಾನಿಸಲು ಅವಕಾಶವಿಲ್ಲ. ಹೀಗಾಗಿ, ಹಬ್ಬದ ದಿನಾಂಕ ಖಚಿತವಾಗಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.