ಬೆಂಗಳೂರು: ಲೋಕಾಯುಕ್ತ ಕಚೇರಿಯಿಂದ ಬಂದ ವಿಚಾರಣಾ ವರದಿಗಳ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.
ಲೋಕಾಯುಕ್ತ ಕಾಯ್ದೆಯಡಿ ಸಲ್ಲಿಕೆಯಾದ 141 ವರದಿಗಳಲ್ಲಿ 128 ವರದಿಗಳಿಗೆ ಸಂಬಂಧಿಸಿದಂತೆ 14 ಇಲಾಖೆಗಳು ಕ್ರಮ ಕೈಗೊಂಡ ವರದಿಗಳನ್ನು ಸಲ್ಲಿಸಿವೆ ಎಂದು ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಅವರಿದ್ದ ಪೀಠಕ್ಕೆ ಸರ್ಕಾರ ವಿವರಿಸಿತು.
ಸರ್ಕಾರವು ಕಾಯ್ದೆಯ ನಿಬಂಧನೆಗಳನ್ನು ಪಾಲಿಸುತ್ತಿಲ್ಲ. ಕಾಯ್ದೆಯ ಸೆಕ್ಷನ್ 12(1) ಪ್ರಕಾರ ನಿಗದಿತ ಸಮಯದಲ್ಲಿ ಸರ್ಕಾರ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕಾಗುತ್ತದೆ. ಸರ್ಕಾರ ಅದನ್ನು ಮಾಡುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಿದ್ದರು.
ಈ ಸಂಬಂಧ ಸರ್ಕಾರಕ್ಕೆ ಮೆಮೊ ಸಲ್ಲಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ(ಕಣ್ಗಾವಲು) ಜಂಟಿ ಕಾರ್ಯದರ್ಶಿ ಎಲ್. ಶಾರದಾ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿ 10 ಇಲಾಖೆಗಳಿಂದ ಮಾಹಿತಿ ನಿರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಮೆಮೊ ಪರಿಶೀಲಿಸಿದ ಪೀಠ, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.