ADVERTISEMENT

Live | ರಾಜೀನಾಮೆ ಹಿಂಪಡೆಯಲ್ಲ: ಶಾಸಕ ಬಿ.ಸಿ.ಪಾಟೀಲ್, ಬೈರತಿ ಬಸವರಾಜ್‌

ಕ್ಷಣಕ್ಕೊಂದು ತಿರುವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 12:21 IST
Last Updated 12 ಜುಲೈ 2019, 12:21 IST
   

ಬೆಂಗಳೂರು: ರಾಜ್ಯ ರಾಜಕಾರಣ ಮತ್ತೊಂದು ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಇಂದಿನಿಂದ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನಆರಂಭವಾಗುತ್ತದೆ. ಅಧಿವೇಶನದಲ್ಲಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ. ಮತ್ತೊಂದೆಡೆ ಶಾಸಕರ ರಾಜೀನಾಮೆ ಸರಣಿಯಿಂದ ಕಂಗೆಟ್ಟಿರುವ ಮೈತ್ರಿ ನಾಯಕರು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡಲು ಸಜ್ಜಾಗಿದ್ದಾರೆ.

4:30–ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು

ರಾಜ್ಯ ರಾಜಕಾರಣ ಮತ್ತೊಂದು ತಿರುವು ಪಡೆಯುತ್ತಿದ್ದು ಬಿಜೆಪಿ ಶಾಸಕರು ರೆಸಾರ್ಟ್‌ ರಾಜಕಾರಣದ ಮೊರೆ ಹೋಗಿದ್ದಾರೆ.ಯಲಹಂಕದ ರಾಜಾನುಕುಂಟೆ ಸಮೀಪದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ADVERTISEMENT

3:30–ವಿಧಾನಸಭಾ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಮುಂಗಾರ ಅಧಿವೇಶನದ ವಿಧಾನಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

3:00–ರಾಜೀನಾಮೆ ಹಿಂಪಡೆಯಲ್ಲ:ಶಾಸಕ ಬಿ.ಸಿ.ಪಾಟೀಲ್, ಬೈರತಿ ಬಸವರಾಜ್‌

ಯಾವುದೇ ಕಾರಣಕ್ಕೆ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ, ಮತ್ತೆ ಮಾತೃ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಅತೃಪ್ತ ಶಾಸಕರಾದ ಬಿ.ಸಿ.ಪಾಟೀಲ್‌ ಮತ್ತು ಬೈರತಿ ಬಸವರಾಜ್ ಹೇಳಿದ್ದಾರೆ. ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನಾವು ನಮ್ಮ ಅಚಲ ನಿರ್ಧಾರಕ್ಕೆ ಬದ್ದರಾಗಿದ್ದೇವೆ, ನಾವೆಲ್ಲ ಒಟ್ಟಾಗಿದ್ದೇವೆ ಎಂದು ಬೈರತಿ ಬಸವರಾಜ್‌ ಹೇಳಿದರು.

1:18–ವಿಶ್ವಾಸಮತ ಯಾಚಿಸುತ್ತೇನೆ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

‘ಇಂದು ಅನಿವಾರ್ಯವಾಗಿ ನಾನು ಈ ಮಾತು ಹೇಳ್ತಿದ್ದೀನಿ. ಸದನದ ಬೆಂಬಲ ಇದ್ದರೆ ಮಾತ್ರ ನಾನು ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ನಾನು ಸ್ವಪ್ರೇರಣೆಯಿಂದ ವಿಶ್ವಾಸಮತ ಮಂಡಿಸಲು ನಿರ್ಧರಿಸಿದ್ದಾರೆ. ನನಗೆ ಸಮಯ ಕೊಡಿ. ಅಂತ ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.

1:15–ಸುಪ್ರೀಂಕೋರ್ಟ್‌ ಸುದೀರ್ಘ ವಿಚಾರಣೆ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ. ಯಥಾಸ್ಥಿತಿ ಕಾಪಾಡಲು ಸೂಚನೆ

ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ಕರ್ನಾಟಕ ಶಾಸಕರು ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಥಾಸ್ಥಿತಿ ಕಾಪಾಡಲು ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

‘ಈ ಪ್ರಕರಣದಲ್ಲಿ ಸಂವಿಧಾನಾತ್ಮಕ ಅಂಶಗಳು ಅಡಕವಾಗಿದ್ದು, ಹೆಚ್ಚಿನ ವಿಚಾರಣೆ ಅಗತ್ಯ’ ಎಂದು ಪೀಠವು ಅಭಿಪ್ರಾಯಪಟ್ಟಿತು. ಶಾಸಕರ ಪರ ಮುಕುಲ್ ರೋಹಟ್ಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ, ಮುಖ್ಯಮಂತ್ರಿ ಪರ ವಕೀಲ ರಾಜೀವ್ಧವನ್ ವಾದ ಮಂಡಿಸಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಮಾಡಬೇಡಿ.ಯಥಾಸ್ಥಿತಿ ಕಾಪಾಡಿ ಎಂದು ಸೂಚಿಸಿ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು.

1:07– ಅತಂತ್ರ ಸ್ಥಿತಿ

ಮಂಗಳವಾರದವರೆಗೆ ಅತಂತ್ರಸ್ಥಿತಿ ಮುಂದುವರಿಕೆ. ವಿಪ್ ಉಲ್ಲಂಘನೆ ಭೀತಿಯಿಂದ ಅತೃಪ್ತ ಶಾಸಕರು ಸದ್ಯಕ್ಕೆ ಬಚಾವ್.

1:05– ಸ್ಪೀಕರ್‌ಗೆ ನಿರ್ದೇಶನ

ಯಥಾಸ್ಥಿತಿ ಕಾಪಾಡಲು ಸೂಚನೆ.ರಾಜೀನಾಮೆ ಅಂಗೀಕರಿಸುವಂತಿಲ್ಲ. ಅನರ್ಹತೆ ಮಾಡುವಂತಿಲ್ಲ. ‘ಕೆಲ ಮಹತ್ವದ ಸಾಂವಿಧಾನಿಕ ವಿಚಾರಗಳನ್ನು ಮೊದಲು ಇತ್ಯರ್ಥ ಪಡಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌.

1:00– ಯಥಾಸ್ಥಿತಿ ಕಾಪಾಡಿ

ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ. ಮಂಗಳವಾರದವರೆಗೆ ಸ್ಪೀಕರ್‌ಗೂ ಕಾಲಾವಕಾಶ. ಯಥಾಸ್ಥಿತಿ ಕಾಪಾಡಲು ಸೂಚನೆ.

1:00– ತೀರ್ಪು ಓದಲು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್

‘ಸಾಂವಿಧಾನಿಕ ಪೀಠಸ್ಪೀಕರ್‌ಗೆ ನಿರ್ದೇಶನ ನೀಡಬಹುದೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ನಿರ್ದೇಶನ ನೀಡುವ ಪರಿಸ್ಥಿತಿ ಉದ್ಭವಿಸಿದೆ’.

12:54– ರಾಜೀನಾಮೆ ಕೊಟ್ಟ ಮೇಲೆ ಹೇಗೆ ವಿಪ್ ಕೊಡ್ತೀರಿ?

ಶಾಸಕರು ರಾಜೀನಾಮೆ ಕೊಟ್ಟ ಮೇಲೆ ವಿಪ್ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಸದಸ್ಯತ್ವ ಅನಹರ್ವಾಗಬೇಕು ಎಂದೇ ವಿಪ್ ನೀಡಲಾಗಿದೆ. –ಅತೃಪ್ತರ ಪರ ವಕೀಲ ಮುಕುಲ್ ರೋಹಟಗಿ.

12:54– ಸ್ಪೀಕರ್ ಮನವಿ

ಕಾಲಮಿತಿಯಲ್ಲಿ ರಾಜೀನಾಮೆ ಬಗ್ಗೆ ನಿರ್ಧರಿಸುವಂತೆ ಆದೇಶ ನೀಡಬೇಡಿ. ನನಗೆ ಸಾಕಷ್ಟು ಕಾಲಾವಕಾಶ ಬೇಕು. –ಸ್ಪೀಕರ್ ಮನವಿ

12:53– ಸುಪ್ರೀಂಕೋರ್ಟ್‌ಗೆ ಸ್ಪೀಕರ್ ಪ್ರಮಾಣ ಪತ್ರ

ನಾನು ರಾಜೀನಾಮೆ ಮತ್ತು ಅನರ್ಹತೆಯ ಬಗ್ಗೆ ಶೀಘ್ರ ವಿಲೇವಾರಿ ಮಾಡುತ್ತೇನೆ ಎಂದು ಸ್ಪೀಕರ್ ರಮೇಶ್‌ ಕುಮಾರ್‌ ಪರ ವಕೀಲರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರು.

12:50– ಯಾವ ಆಧಾರದ ಮೇಲೆ ಸ್ಪೀಕರ್‌ಗೆ ನಿರ್ದೇಶನ ನೀಡುತ್ತೀರಿ?ರಾಜೀನಾಮೆಯೇ ಬೇರೆ, ಅನರ್ಹತೆಯೇ ಬೇರೆ. ಅತೃಪ್ತರಿಗೆ ಅನರ್ಹತೆ ಬೇಡವಾಗಿದೆ. ರಾಜೀನಾಮೆ ಬೇಕಾಗಿದೆ. –ರಾಜೀವ್ ಧವನ್.

12:46–ಮತ್ತೆ ವಾದ ಅರಂಭಿಸಿದ ಸಿಎಂ ಪರ ವಕೀಲ ರಾಜೀವ್ ಧವನ್

12:42– ಸಿಎಂ ಪರ ವಕೀಲರ ವಾದ ಅಂತ್ಯ

ಇದು ರಾಜಕೀಯ ಪ್ರೇರಿತ ದೂರು. ಅತೃಪ್ತರ ಅರ್ಜಿ ಆಧರಿಸಿದ ಆದೇಶ ನೀಡಬೇಡಿ. ದುರಾಡಳಿತ ಭ್ರಷ್ಟಾಚಾರಗಳಿಗೆ ಬೇಸತ್ತು ರಾಜೀನಾಮೆ ನೀಡಿದ್ದೇವೆ ಎಂದು ಶಾಸಕರು ಹೇಳಿದ್ದಾರೆ. ಈ ಬಗ್ಗೆ ಸ್ಪೀಕರ್ ವಿಚಾರಿಸಬೇಕಿದೆ.

12:40– ನಮ್ಮ ಸರ್ಕಾರ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ: ಸಿಎಂ ಪರ ವಕೀಲ

12:39– ರಾಜೀನಾಮೆ ನೀಡಿರುವ ಓರ್ವ ಶಾಸಕ ಹಗರಣದಲ್ಲಿ ಭಾಗಿ: ಸಿಎಂ ಪರ ವಕೀಲ

‘ಯಾವ ಆಧಾರದ ಮೇಲೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೇಳುತ್ತಿದ್ದಾರೆ. ರಾಜೀನಾಮೆ ಕೊಟ್ಟಿರುವ ಓರ್ವ ಶಾಸಕ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇಂಥವರು ಯಾವ ಕಾರಣಕ್ಕಾಗಿ ಸುಪ್ರೀಂಕೋರ್ಟ್‌ಗೆ ಬಂದಿದ್ದಾರೆ?’ರಾಜೀವ್ ಧವನ್ ಪ್ರಶ್ನೆ.

12:35– ಯಾವ ಆಧಾರದ ಮೇಲೆ ಸುಪ್ರೀಂಕೋರ್ಟ್‌ಗೆ ಬಂದಿದ್ದಾರೆ:ರಾಜೀವ್ ಧವನ್ ಪ್ರಶ್ನೆ

ರಾಜೀನಾಮೆ ಪ್ರಕ್ರಿಯೆಲ್ಲಿ ರಾಜ್ಯಪಾಲರ ಪಾತ್ರ ಇಲ್ಲ. ಆದರೆ ಶಾಸಕರು ರಾಜ್ಯಪಾಲರಿಗೂ ರಾಜೀನಾಮೆ ಕೊಟ್ಟಿದ್ದಾರೆ. ಅವರು ಯಾವ ಆಧಾರದ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ಪಾತ್ರವನ್ನು ಪ್ರಶ್ನಿಸಿದ್ದಾರೆ. ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. ಗೊಂದಲಮಯ ಬೆಳವಣಿಗೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

12:30– ಮುಖ್ಯಮಂತ್ರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತವಿದೆ

ಮುಖ್ಯಮಂತ್ರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತವಿದೆ. ಅತೃಪ್ತರ ಅರ್ಜಿಯನ್ನು ನೇರವಾಗಿ ವಿಚಾರಣೆಗೆ ಅಂಗೀಕರಿಸಬಾರದಿತ್ತು. ನಿನ್ನೆ ಸುಪ್ರೀಕೋರ್ಟ್‌ ನೀಡಿದ ಆದೇಶ ಏಕಪಕ್ಷೀಯವಾಗಿತ್ತು.

12:30– ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ವಾದ ಮಂಡನೆ ಆರಂಭ

12:23– ಸ್ಪೀಕರ್ ಪರ ವಕೀಲರ ವಾದ ಮುಕ್ತಾಯ

ಅತೃಪ್ತರ ಪರ ಮುಕುಲ್ ರೋಹಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮುಕ್ತಾಯ. ಆದೇಶಕ್ಕೆ ಕ್ಷಣಗಣನೆ.

12:23– ಅನರ್ಹತೆ ವಿಚಾರ ನಿರ್ಧರಿಸಬೇಕು

ನಾಳೆ ಬಿಜೆಪಿ ಸರ್ಕಾರ ರಚಿಸಿದ್ರೆ 10 ಮಂದಿ ಅತೃಪ್ತರು ಮಂತ್ರಿಗಳಾಗುತ್ತಾರೆ. ಹೀಗಾಗಿ ರಾಜೀನಾಮೆಗೂ ಮುನ್ನ ಅನರ್ಹತೆಯ ವಿಚಾರ ನಿರ್ಧರಿಸಬೇಕು ಎಂದಸ್ಪೀಕರ್ ಪರ ವಕೀಲ ಸಿಂಘ್ವಿ, ಸ್ಪೀಕರ್‌ ವಿವೇಚನೆ ಮತ್ತು ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ ಸುದೀರ್ಘ ವಿವರಣೆ ನೀಡಿದರು.

12:23– ಸದನ ನಡೆಸುವವಿಚಾರದಲ್ಲಿ ಸುಪ್ರೀಂಕೋರ್ಟ್‌ ಹಸ್ತಕ್ಷೇಪ ಮಾಡುವಂತಿಲ್ಲ: ಸ್ಪೀಕರ್ ಪರ ವಕೀಲರ ವಾದ

12:23– ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಸಂವಿಧಾನದ ಅರಿವಿದೆ: ಸಿಂಘ್ವಿ

12:20– ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ರಾಜೀನಾಮೆ ಅಂಗೀಕಾರಕ್ಕೆ ಹೆಚ್ಚು ಸಮಯಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್‌. ಹಳೆಯ ಪ್ರಕರಣಗಳನ್ನು ಪ್ರಸ್ತಾಪಿಸಿದ ಸಿಂಘ್ವಿ, ಹೆಚ್ಚಿನ ಸಮಯ ಕೋರಿದರು.

12:20–ಸುಪ್ರೀಂಕೋರ್ಟ್‌ ಪರಮಾಧಿಕಾರವನ್ನು ಸ್ಪೀಕರ್‌ ಪ್ರಶ್ನಿಸಿಲ್ಲ– ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸ್ಪಷ್ಟನೆ

12:16–ಸುಪ್ರೀಂಕೋರ್ಟ್‌ ಪರಮಾಧಿಕಾರವನ್ನು ಸ್ಪೀಕರ್‌ ಪ್ರಶ್ನಿಸುತ್ತಿದ್ದಾರಾ? –ಸಿಜೆಐ

ಸುಪ್ರೀಂಕೋರ್ಟ್‌ ಪರಮಾಧಿಕಾರವನ್ನು ಕರ್ನಾಟಕದ ಸ್ಪೀಕರ್ ರಮೇಶ್‌ ಕುಮಾರ್ ಪ್ರಶ್ನಿಸುತ್ತಿದ್ದಾರಾ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್.

12:16–ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಆರಂಭ

12:14–ಅತೃಪ್ತರ ಪರ ಮುಕುಲ್ ರೋಹಟಗಿ ವಾದ ಮುಕ್ತಾಯ

12:08–ನ್ಯಾಯಾಲಯಗಳಿಗೆ ಶಾಸಕರು ಹೋಗೋದು ತಪ್ಪಾ?

ಶಾಸಕರು ನ್ಯಾಯಾಲಯಕ್ಕೆ ಹೋಗುವುದು ತಪ್ಪೇ ಎಂದು ಪ್ರಶ್ನಿಸಿದ ಅತೃಪ್ತರ ಪರ ವಕೀಲ ಮುಕುಲ್ ರೋಹಟಗಿ ಪ್ರಶ್ನೆ. ಶಾಸಕರು ರಾಜೀನಾಮೆ ನೀಡಿ ಜನರ ಬಳಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ರೋಹಟಗಿ.

12:06–ಕೆಲ ಅಂಶಗಳಿಗೆ ಆಕ್ಷೇಪ

ಸ್ಪೀಕರ್ ಸುದ್ದಿಗೋಷ್ಠಿಯ ವಿವರ ನೀಡಿದ ಅತೃಪ್ತರ ಪರ ವಕೀಲ ಮುಕುಲ್ ರೋಹಟಗಿ. ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಪ್ರಸ್ತಾಪಿಸಿದ ಕೆಲ ಅಂಶಗಳಿಗೆ ಆಕ್ಷೇಪ.

12:03–ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತರ ಅರ್ಜಿ ವಿಚಾರಣೆ ಆರಂಭ

12:01– ಸಿಡಿ ಸಿಗಲಿಲ್ಲ, ತಡವಾಯಿತು: ಸ್ಪೀಕರ್ ಪರ ವಕೀಲ

12:00–ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌

ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದೂಡಿದೆ. ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಡವಾಗಿ ಬಂದಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

11.40–ನಾವು ಅರ್ಜಿ ಸಲ್ಲಿಸಿಲ್ಲ: ಕಾಂಗ್ರೆಸ್ ಸ್ಪಷ್ಟನೆ

‘ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಯುವ ಕಾಂಗ್ರೆಸ್‌ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಆಧಾರ ರಹಿತ’ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್ ಮಾಡಿದೆ.

11.30– ವಿಚಾರಣೆ ನಡೆಯುವಾಗ ನೀವೂ ಇರಿ’ ಯೂತ್ ಕಾಂಗ್ರೆಸ್ ವಕೀಲರಿಗೆಸಿಜೆಐ ಸೂಚನೆ

ಕರ್ನಾಟಕ ರಾಜಕೀಯ ಸಂಘರ್ಷ ಕುರಿತಂತೆ ವಿಚಾರಣೆ ನಡೆಯುವ ವೇಳೆ ನೀವೂ ಇರಿ ಎಂದು ತ್ರಿಸದಸ್ಯ ನ್ಯಾಯಪೀಠದ ಮುಖ್ಯಸ್ಥರೂ ಆಗಿರುವಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಸೂಚಿಸಿದ್ದಾರೆ ಎಂದುಯೂತ್‌ ಕಾಂಗ್ರೆಸ್ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

11.27– ‘ನಮ್ಮ ವಾದವನ್ನೂ ಆಲಿಸಿ’ಸುಪ್ರೀಂಕೋರ್ಟ್‌ಗೆ ಯೂತ್ಕಾಂಗ್ರೆಸ್ ಮೊರೆ

ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನೂ ಆಲಿಸಬೇಕು ಎಂದು 400ಕ್ಕೂ ಹೆಚ್ಚು ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

11.20–ಶಾಸಕರು ಮುಂಬೈಗೆ ಏಕೆ ಹೋದರು: ರಮೇಶ್‌ಕುಮಾರ್

ಸಂವಿಧಾನ ನನಗೆ ನೀಡಿರುವ ಅಧಿಕಾರದ ಪ್ರಕಾರ ವಿವೇಚನೆ ಬಳಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ ನನಗೆ ವಿಶ್ವಾಸವಿದೆಎಂದು ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು.‘ನಿನ್ನೆ ಮುಂಬೈನಿಂದ ಅವರು ಹೇಗೆ ಬಂದರು?ಅವರಿಗೆ ಎಂಥ ಭದ್ರತೆ ಕೊಡಲಾಯಿತು?ಅವರು ಮುಂಬೈಗೆ ಯಾವಾಗ ಹೋದರು? ಏಕೆ ಹೋದರು?ಸುಪ್ರೀಂಕೋರ್ಟ್‌ ಅನುಮತಿ ಪಡೆದು ಅವರು ಇಲ್ಲಿಗೆ ಬರಬೇಕಾ? ಅವರು ನನ್ನ ಬಗ್ಗೆ ಏನು ಅಂದುಕೊಂಡಿದ್ದಾರೆ?’ ಎಂದು ರಮೇಶ್‌ಕುಮಾರ್ ಪ್ರಶ್ನಿಸಿದರು.

10.00–ದೇವೇಗೌಡರ ಸಲಹೆ ಪಡೆದ ಕುಮಾರಸ್ವಾಮಿ

ಅಧಿವೇಶನ ನಡೆಯುವ ಮೊದಲು ತಂದೆ ದೇವೇಗೌಡರ ಮನೆಗೆ ಧಾವಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸುದೀರ್ಘ ಚರ್ಚೆಯಲ್ಲಿ ತಲ್ಲೀನರಾಗಿದ್ದಾರೆ. ಇಂದು ಸದನ ನಡೆಸುವ ಮತ್ತು ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆಕಾರ್ಯತಂತ್ರ ಹೆಣೆಯುತ್ತಿದ್ದಾರೆ.

‘ರಾಜೀನಾಮೆಯ ಪ್ರಸ್ತಾಪ ಮಾಡುವುದು ಬೇಡ. ಏನು ಬೇಕಾದರೂ ಆಗಬಹುದು. ಧೈರ್ಯಗೆಡದೆ ಪರಿಸ್ಥಿತಿ ಎದುರಿಸು’ ಎಂದು ದೇವೇಗೌಡರಿಂದ ಪುತ್ರನಿಗೆ ಹಿತೋಪದೇಶ. ಎರಡು ತಾಸು ಸಮಾಲೋಚನೆಯ ನಂತರ ವಿಧಾನಸೌಧದ ಕಡೆಗೆ ಹೊರಟರು ಕುಮಾರಸ್ವಾಮಿ.

9.00–ದೇವರು ಕೊಟ್ಟ ಸರ್ಕಾರ, ಉಳಿಯುತ್ತೆ

ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಚ್‌.ಡಿ.ರೇವಣ್ಣ, ‘ಕುಮಾರಸ್ವಾಮಿ ಅವರಿಗೆ ದೇವರು ಆಶೀರ್ವಾದ ಮಾಡಿ ಕೊಟ್ಟಿರುವ ಸರ್ಕಾರ ಇದು. ಏನು ಮಾಡಿದ್ರೂ ಬಿದ್ದು ಹೋಗಲ್ಲ. ಉಳಿಯುತ್ತೆ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು. ‘ನಮ್ಮ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಊಟ ಸೇರಲ್ಲ’ ಎಂದು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.