ಯಲ್ಲಾಪುರ(ಉತ್ತರ ಕನ್ನಡ) : ನಾಲ್ಕನೆಯ ದಿನವೂ ಮಳೆಯ ಆರ್ಭಟ ಮುಂದುವರೆದಿದ್ದು ಅನೇಕ ಅವಾಂತರ ಸೃಷ್ಟಿಸುತ್ತಿದೆ. ತಾಲ್ಲೂಕಿನ ಅರಬೈಲ್ ಘಟ್ಟ ಮಳೆಯ ಆರ್ಭಟಕ್ಕೆ ರಾಷ್ಷ್ರೀಯ ಹೆದ್ದಾರಿ 63ರ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು.
ಬೆಳಗಿನ ಜಾವ 3.30 ರ ಸುಮಾರಿಗೆ ಗುಡ್ಡ ಕುಸಿದಿತ್ತು. ಗುಡ್ಡ ಕುದಿಯುತ್ತಿರುವ ಸಂದರ್ಭದಲ್ಲಿ ಖಾಸಗಿ ಬಸ್ ಒಂದು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದೆ.
ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಧಾವಿಸಿದ ಅಧಿಕಾರಿಗಳು ಜೆಸಿಬಿಗಳನ್ನು ಬಳಸಿ ಮಣ್ಣು ತೆರವುಗೊಳಿಸಿ ವಾಹನಗಳನ್ನು ಬೆಳಿಗ್ಗೆ 7.30ರ ಸುಮಾರಿಗೆ ಸಂಚಾರಕ್ಕೆ ಮುಕ್ತಗೊಳಿಸಿದರು.
ಮಡಿಕೇರಿ(ಕೊಡಗು): ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. 35 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಮಂಗಳವಾರವೂ ಸಹ ರಜೆ ನೀಡಲಾಗಿದೆ.
ಸುಂಟಿಕೊಪ್ಪ ಸಮೀಪದ ಶ್ರೀದೇವಿ ಬಳಿ ರಾತ್ರಿ ಸುರಿದ ಗಾಳಿ ಮಳೆಗೆ ಭಾರಿ ಗಾತ್ರದ ಮರಬಿದ್ದು ಸುಂಟಿಕೊಪ್ಪ- ಚೆಟ್ಟಳ್ಳಿ ರಸ್ತೆ ಬಂದ್ ಆಗಿದೆ.
ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಭಾಗಮಂಡಲ- ಮಡಿಕೇರಿ ಹಾಗೂ ಭಾಗಮಂಡಲ- ಅಯ್ಯಂಗೇರಿ ಸಂಪರ್ಕ ಕಡಿತವಾಗಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ) : ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಕ್ಕೆಸುಬ್ರಹ್ಮಣ್ಯ ಭೇಟಿಗೆ ಮಳೆ ಅಡ್ಡಿ.ಉದನೆಯಲ್ಲಿ ಗುಂಡ್ಯ ಹೊಳೆಯಿಂದ ರಸ್ತೆ ಸಂಚಾರ ಬಂದ್ ಆಗಿದೆ. ಕುಮಾರಧಾರ ನದಿ ಪ್ರವಾಹದಿಂದ ಪಂಜ ರಸ್ತೆಯೂ ಬಂದ್ ಆಗಿದೆ. ಹೀಗಾಗಿ ಸಿಎಂ ಅವರು ಧರ್ಮಸ್ಥಳದಿಂದ ಪುತ್ತೂರು, ಸೋಣಂಗೇರಿ ಮೂಲಕ ಕುಕ್ಕೆಯತ್ತ ತೆರಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.