ಬೆಂಗಳೂರು: ‘ಸಾರಿಗೆ ಸಂಸ್ಥೆಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ದೂರವಾಣಿ ಇಟ್ಟುಕೊಳ್ಳದಂತೆ ವಿಧಿಸಿರುವ ನಿರ್ಬಂಧ ಹಿಂಪಡೆಯಬೇಕು’ ಎಂದು ನೌಕರರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದರು.
ಶನಿವಾರ ಇಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ‘ಕೊಪ್ಪಳ ವಿಭಾಗದ ಚಾಲಕನ ಮಗಳು ಮೃತಪಟ್ಟಿದ್ದರೂ ವಿಷಯ ತಿಳಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಕೊನೆ ಬಾರಿ ಮಗಳ ಮುಖ ನೋಡುವ ಭಾಗ್ಯ ಆ ಚಾಲಕನಿಗೆ ಇಲ್ಲವಾಯಿತು. ಮೊಬೈಲ್ ದೂರವಾಣಿ ಇಟ್ಟುಕೊಂಡರೆ ಅಮಾನತುಗೊಳಿಸುವುದಾಗಿ ಅಧಿಕಾರಿಗಳು ಆದೇಶಹೊರಡಿಸಿರುವುದೇ ಇದಕ್ಕೆ ಕಾರಣ’ ಎಂದರು.
‘ಕರ್ತವ್ಯದ ಅವಧಿಯಲ್ಲಿ ದೂರವಾಣಿ ಬಳಸದಂತೆ ನಿರ್ಬಂಧ ವಿಧಿಸಲಿ, ಆದರೆ, ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮ ಸರಿಯಲ್ಲ.ಇದನ್ನು ವಾಪಸ್ ಪಡೆಯಲು ಸೂಚಿಸಬೇಕು’ ಎಂದು ಮನವಿ ಮಾಡಿದರು.
‘ಹೊರ ರಾಜ್ಯಗಳಲ್ಲಿರುವ ನಿಯಮಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.