ಕಲಬುರ್ಗಿ: ಪಿಎಸ್ಐ ಪ್ರಶಿಕ್ಷಣಾರ್ಥಿ ಬಸವರಾಜ ಶಂಕ್ರರೆಪ್ಪ ಮಂಚನೂರ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದ ಎಲ್ಲ ಪ್ರಶಿಕ್ಷಣಾರ್ಥಿಗಳ ನಡೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ಬಸವರಾಜ ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿ. ಅವರ 590 ಸಹಪಾಠಿಗಳು ತಲಾ ₹ 10 ಸಾವಿರ ಸಹಾಯ ನೀಡಿದ್ದು ಅನುಕರಣೀಯ. ಇದಕ್ಕೆ ಪ್ರೇರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯ ಸರ್ಕಾರವು ನಿಯಮಾನುಸಾರ ಬಸವರಾಜ ಅವರಿಗೆ ನೀಡಬೇಕಾದ ಪರಿಹಾರಗಳನ್ನು ತ್ವರಿತವಾಗಿ ನೀಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಗೃಹಸಚಿವ ಎಂ.ಬಿ.ಪಾಟೀಲ, ಪಿಎಸ್ಐ ಪ್ರಶಿಕ್ಷಣಾರ್ಥಿಗಳ ನಡೆ ಪ್ರಶಂಸನೀಯ. ಇದು ಪೊಲೀಸ್ ಇಲಾಖೆಯಲ್ಲಿನ ಸಹೋದರ ಭಾವನೆಯನ್ನು ಸಾರುತ್ತದೆ. ಖಾಕಿ ಸಮವಸ್ತ್ರದ ಗೌರವ, ಒಗ್ಗಟ್ಟನ್ನು ಎತ್ತಿಹಿಡಿದಿದೆ’ ಎಂದಿದ್ದಾರೆ.
‘ಶೀಘ್ರದಲ್ಲೇ ಕಲಬುರ್ಗಿಯ ಪೊಲೀಸ್ ತರಬೇತಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳನ್ನು ಕಂಡು, ಇಲಾಖೆಯ ಭವಿಷ್ಯದ ಉತ್ತಮ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.