ADVERTISEMENT

ಲಾ ಏಷ್ಯಾ ಸಮ್ಮೇಳನ | ದುರ್ಬಲ ಸಮುದಾಯಗಳ ರಕ್ಷಣೆಗೆ ಆದ್ಯತೆ ಅವಶ್ಯ: ಚಂದ್ರಚೂಡ್‌

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 15:56 IST
Last Updated 25 ನವೆಂಬರ್ 2023, 15:56 IST
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಆನ್‌ಲೈನ್‌ ಮೂಲಕ ಹಾಜರಾಗಿ ದಿಕ್ಸೂಚಿ ನುಡಿಗಳನ್ನಾಡಿದರು.
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಆನ್‌ಲೈನ್‌ ಮೂಲಕ ಹಾಜರಾಗಿ ದಿಕ್ಸೂಚಿ ನುಡಿಗಳನ್ನಾಡಿದರು.   

ಬೆಂಗಳೂರು: ‘ಜಾತಿ, ಲಿಂಗಾಧಾರಿತ ಅಸಮಾನತೆಗಳ ಜೊತೆಜೊತೆಗೇ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಎದುರಿಸುತ್ತಿರುವ ದುರ್ಬಲ ಸಮುದಾಯಗಳ ರಕ್ಷಣೆಗೆ ಆಡಳಿತ ವ್ಯವಸ್ಥೆ ಕಟಿಬದ್ಧವಾಗಬೇಕಾದ ಅವಶ್ಯ ಇದೆ‘ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಒತ್ತಿ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಅಂತರರಾಷ್ಟ್ರೀಯ ‘ಲಾ ಏಷ್ಯಾ ಸಮ್ಮೇಳನ–2023‘ರ ಎರಡನೇ ದಿನವಾದ ಶನಿವಾರ, ವಿವಿಧ ಗೋಷ್ಠಿಗಳ ಆರಂಭಕ್ಕೂ ಮುನ್ನ, ’ಸ್ವಾತಂತ್ರ್ಯದ ಹೊಸ ಹಾದಿಯಲ್ಲಿ ವ್ಯಕ್ತಿ ಮತ್ತು ರಾಜ್ಯಗಳ ಗುರುತು‘ ಎಂಬ ವಿಷಯವನ್ನು ಕೇಂದ್ರವಾಗಿಸಿಕೊಂಡು ಅವರು ದಿಕ್ಸೂಚಿ ನುಡಿಗಳನ್ನಾಡಿದರು.

‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಸಾಂವಿಧಾನಿಕ ರಕ್ಷಣೆಯನ್ನು ಕಾಪಾಡುವ ದಿಸೆಯಲ್ಲಿ ರಾಜ್ಯಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾಂಪ್ರದಾಯಿಕ ಸ್ವಾತಂತ್ರ್ಯದ ಮನಃಸ್ಥಿತಿಯಿಂದ ಸಮಕಾಲೀನ ಸ್ವಾತಂತ್ರ್ಯದ ಕಡೆಗೆ ನಾವು ದೃಷ್ಟಿ ಹಾಯಿಸಬೇಕಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಭಾರತದ ನ್ಯಾಯಾಂಗ ವ್ಯವಸ್ಥೆ ಇಂದು ಡಿಜಲೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಆಧುನಿಕ ತಂತ್ರಜ್ಞಾನಗಳ ಮಧ್ಯೆ ನಾಗಾಲೋಟದಲ್ಲಿ ಸಾಗುತ್ತಿದ್ದು ಈ ದಿಸೆಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅವಶ್ಯ ಇದೆ‘ ಎಂದರು.

ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ, ’ಕೊರೊನಾ ಅವಧಿಯ ನಂತರದ ಬೆಳವಣಿಗೆಗಳಲ್ಲಿ ಕರ್ನಾಟಕ ಹೈಕೋರ್ಟ್ ತಂತ್ರಜ್ಞಾನ ಆಧಾರಿತ ಕಲಾಪಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಸಾಕಷ್ಟು ಯಶಸ್ಸು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ‘ ಎಂದರು.

ಗೋಷ್ಠಿಗಳು: ಡಿಜಿಟಲ್‌ ಯುಗದಲ್ಲಿನ ನ್ಯಾಯಾಂಗ ನಡೆ, ವಿವಾಹ: ಒಂದು ಮಾನವ ಹಕ್ಕೇ?, ಅಂತರ್ಜಾಲ ಯುಗದಲ್ಲಿನ ಮಾನವ ಹಕ್ಕುಗಳು ಹಾಗೂ ಆನ್‌ಲೈನ್‌ ಮೂಲಕ ಎಸಗುವ ದೌರ್ಜನ್ಯ, ವಿದೇಶಿ ವಕೀಲರಿಗೆ ಭಾರತದ ನೆಲದಲ್ಲಿ ವಕೀಲಿಕೆಗೆ ಅವಕಾಶ, ಕ್ವೀರ್‌ ಕುಟುಂಬಗಳು ಎದುರಿಸಬೇಕಿರುವ ಕಾನೂನು ಸಮಸ್ಯೆಗಳು, ನ್ಯಾಯಾಂಗ ನಿಂದನೆ, ಉದ್ಯೋಗ ಕಾನೂನು, ಮಕ್ಕಳ ಹಕ್ಕುಗಳು, ಸಾಮಾಜಿಕ ಮಾಧ್ಯಮಗಳಲ್ಲಿನ ರೀಲಿಂಗ್‌ ಮತ್ತು ಅದರಲ್ಲಿ ಅಂಶಗಳ ನಿಯಂತ್ರಣ, ರಿಯಲ್‌ ಎಸ್ಟೇಟ್‌ ಮತ್ತು ಕೊಡುಕೊಳ್ಳುವಿಕೆಯ ವ್ಯವಹಾರ, ರಿಯಲ್‌ ಎಸ್ಟೇಟ್‌ನಲ್ಲಿ ಕ್ರಿಪ್ಟೊಕರೆನ್ಸಿ ಪಾತ್ರ, ಸ್ವತಂತ್ರ ನ್ಯಾಯಾಂಗದ ಬಲವರ್ಧನೆ, ಬ್ಯಾಂಕಿಂಗ್, ಆರ್ಥಿಕತೆ, ಅಂಗವಿಕಲರ ಹಕ್ಕುಗಳು ಮತ್ತು ಅವರ ಕುಟುಂಬಗಳು, ಸ್ಥಳೀಯ ಜನರ ಹಕ್ಕುಗಳು ಮತ್ತು ಸಾಂವಿಧಾನಿಕತೆ... ಹೀಗೆ 15 ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಹಿರಿಯ ವಕೀಲೆ ಜಯ್ನಾ ಕೊಠಾರಿ, ಅಕೈ ಪದ್ಮಸಾಲಿ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು.

ಇವುಗಳಲ್ಲಿ ಕೆಲವು ಮುಖ್ಯ ಗೋಷ್ಠಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಓಕಾ, ಬಿ.ವಿ.ನಾಗರತ್ನ, ಅರವಿಂದ ಕುಮಾರ್‌, ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ನಡೆಸಿಕೊಟ್ಟರು. 

36ನೇ ಲಾ ಏಷ್ಯಾ ಸಮ್ಮೇಳನ–2023
ಎಸ್‌.ಎಸ್.ನಾಗಾನಂದ ಹೈಕೋರ್ಟ್‌ ಹಿರಿಯ ವಕೀಲ
ಲಾ ಏಷ್ಯಾ ಸಮ್ಮೇಳನದಲ್ಲಿ ಪಾಲ್ಗೊಂಡ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ(ಎಡದಿಂದ ಮೂರನೆಯವರು) ಅವರ ಜತೆ ಲಾ ಏಷ್ಯಾದ ಸಹಾಧ್ಯಕ್ಷ ಎಸ್.ಎಸ್. ನಾಗಾನಂದ ಅಧ್ಯಕ್ಷೆ ಮೆಲಿಸ್ಸಾ ಕೆ ಪಾಂಗ್ ಬಾಂಗ್ಲಾದೇಶದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ನಯೀಮಾ ಹೈದರ್.
ಲಾ ಏಷ್ಯಾದ 36ನೇ ಅಂತರರಾಷ್ಟ್ರೀಯ ವಾರ್ಷಿಕ ಸಮ್ಮೇಳನವು ಪ್ರಸ್ತುತ ದಿನಮಾನಗಳನ್ನು ಗಮನದಲ್ಲಿರಿಸಿಕೊಂಡು ಚಿಂತನ–ಮಂಥನ ನಡೆಸಲಿದೆ. 
ಎಸ್‌.ಎಸ್.ನಾಗಾನಂದ ಹೈಕೋರ್ಟ್‌ನ ಹಿರಿಯ ವಕೀಲರು

ಸಹೃದಯಿ ವರಾಳೆ 

‘ಕಂಚಿನಕಂಠದ ದೃಢನುಡಿಗಳ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅತ್ಯಂತ ಸಹೃದಯಿ ಮತ್ತು ಮಗುವಿನ ಮನಸ್ಸುಳ್ಳವರು‘ ಎಂದು ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಕೊಂಡಾಡಿದರು. ಸಮ್ಮೇಳನ ಆರಂಭಕ್ಕೂ ಮುನ್ನ ಅತಿಥಿಗಳ ಪರಿಚಯದ ವೇಳೆ ನಾಗಾನಂದ ಅವರು ‘ವರಾಳೆಯವರು ಕರ್ನಾಟಕದ ಅಳಿಯ ಎಂಬುದು ನಮ್ಮ ಹೆಗ್ಗಳಿಕೆ‘ ಎಂದರಲ್ಲದೆ ‘ತೆರೆದ ನ್ಯಾಯಾಲಯದಲ್ಲಿನ ಕಲಾಪಗಳಲ್ಲಿ ವರಾಳೆ ಅವರು ಕಿರಿಯ ವಕೀಲರಿಗೆ ನೀಡುವ ಅವಕಾಶ ಮಾದರಿಯಾಗಿದೆ. ಅತ್ಯಂತ ವ್ಯವಧಾನದಿಂದ ಕಲಾಪಗಳನ್ನು ನಡೆಸುವ ಅವರ ನಡೆಯಿಂದ ಕಿರಿಯ ವಕೀಲರ ಆತ್ಮವಿಶ್ವಾಸ ವೃದ್ಧಿಸುತ್ತದೆ‘ ಎಂದರು.

ಗೋಷ್ಠಿ ನಡೆಸಿಕೊಟ್ಟ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್.ಓಕಾ (ಎಡದಿಂದ ನಾಲ್ಕನೆಯವರು)

ಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.