ADVERTISEMENT

ಸಾರಿಗೆ ನಷ್ಟ ತಗ್ಗಿಸಲು ಹೊಸ ಕ್ರಮ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:36 IST
Last Updated 27 ಜುಲೈ 2020, 21:36 IST
   

ನವದೆಹಲಿ: ನಾಲ್ಕು ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿಸಲು ‘ನಮ್ಮ ಕೊರಿಯರ್‌’ ಎಂಬ ಕೊರಿಯರ್‌ ಸೇವೆ ಸೇರಿದಂತೆ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿದ್ದು, ಅವುಗಳನ್ನು ಲಾಭದಾಯಕವಾಗಿಸಲು ಹೊಸ ಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೋರಿಯರ್‌ ಸೇವೆಯನ್ನು ತಕ್ಷಣವೇ ಆರಂಭಿಸಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಇದರಿಂದ ವಾರ್ಷಿಕ ₹100 ಕೋಟಿ ನಿವ್ವಳ ಆದಾಯ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ADVERTISEMENT

ನಾಲ್ಕು ನಿಗಮಗಳಲ್ಲಿ ವಾರ್ಷಿಕ ₹800 ಕೋಟಿಯಿಂದ ₹900 ಕೋಟಿಗಳಷ್ಟು ಮೌಲ್ಯದ ಬಿಡಿ ಭಾಗಗಳ ಖರೀದಿ ನಡೆಯುತ್ತಿದೆ. ಇದರಲ್ಲಿ ಬಹಳಷ್ಟು ಸೋರಿಕೆ ಆಗುತ್ತಿರುವುದು ಕಂಡು ಬಂದಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರೀಕೃತ ಲೆಕ್ಕ ನಿರ್ವಹಣೆ ಕ್ರಮ ಜಾರಿ ತರಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್‌ ಬಳಕೆ ಮಾಡಲಾಗುವುದು ಎಂದರು.

ಸಿಬ್ಬಂದಿ ಪ್ರಮಾಣವನ್ನು ಕಡಿತಗೊಳಿಸಿ ದಕ್ಷತೆ ಹೆಚ್ಚಿಸಲು ಆಡಳಿತಾತ್ಮಕ ಸುಧಾರಣೆಗಳನ್ನು ಎಲ್ಲ ನಿಗಮಗಳಲ್ಲಿ ಜಾರಿ ತರಲು ಅಧ್ಯಯನಕ್ಕಾಗಿ ಒಂದು ಸಮಿತಿ ನೇಮಿಸಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.