ADVERTISEMENT

‘ಪಾದರಸ’ದಂತೆ ಕಾರ್ಯನಿರ್ವಹಿಸುವ ನಳಿನ್: ಗಣೇಶ್ ಕಾರ್ಣಿಕ್‌

ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಗಣೇಶ್ ಕಾರ್ಣಿಕ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 16:55 IST
Last Updated 15 ಮಾರ್ಚ್ 2021, 16:55 IST
   

ಬೆಂಗಳೂರು:‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ‘ಪಾದರಸ’ದಂತೆ ಕಾರ್ಯ ನಿರ್ವಹಿಸಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಉಪಚುನಾವಣೆಯಲ್ಲಿನ ಪಕ್ಷದ ಗೆಲುವಿಗೆ ಇವರ ಕಾರ್ಯಕ್ಷಮತೆ ಮತ್ತು ಶ್ರಮವೇ ಕಾರಣ’ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಬಲಿಷ್ಠ ಅಧ್ಯಕ್ಷರ ಹುಡುಕಾಟ’ ವರದಿಗೆ ಸಮಜಾಯಿಷಿ ನೀಡಿರುವ ಅವರು, ಕಟೀಲ್ ಅವರು ತಮ್ಮ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಪಕ್ಷವನ್ನು ಸದೃಢಗೊಳಿಸಿದ್ದಾರೆ. ಅವರ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

2019 ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳ 15 ಕ್ಷೇತ್ರಗಳ ಸ್ಥಾನಗಳಲ್ಲಿ 12 ರಲ್ಲಿ ಗೆದ್ದಿರುವುದು, 2020 ರಲ್ಲಿ ನಡೆದ ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ನಾಲ್ಕು ವಿಧಾನಪರಿಷತ್‌ ಸ್ಥಾನಗಳನ್ನು ಗೆದ್ದಿರುವುದು ಇವರ ಸಂಘಟನಾತ್ಮಕ ಕಾರ್ಯಕ್ಷಮತೆಗೆ ಸಾಕ್ಷಿ ಎಂದಿದ್ದಾರೆ.

ADVERTISEMENT

ಅಲ್ಲದೆ, ಕಟೀಲ್‌ ಅವರು ಪರಿಚಯಿಸಿದ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳ ಪರಿಕಲ್ಪನೆಯಿಂದಾಗಿಯೇ ಗ್ರಾಮಪಂಚಾಯತ್‌ ಚುನಾವಣೆಯಲ್ಲಿ 83,183 ಸ್ಥಾನಗಳಲ್ಲಿ 45,246 ಸ್ಥಾನಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಅಲ್ಲದೆ, 5,670 ಪಂಚಾಯತ್‌ಗಳ ಪೈಕಿ 3,142 ಪಂಚಾಯತ್‌ಗಳನ್ನು ಬಿಜೆಪಿ ಬೆಂಬಲಿತರು ಗೆಲವು ಸಾಧಿಸಲು ಸಾಧ್ಯವಾಗಿದೆ ಎಂದೂ ಕಾರ್ಣಿಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.