ಬೆಂಗಳೂರು: ಹೈಕೋರ್ಟ್ನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಗಿರಿಧರ್ ಯಲ್ಲಪ್ಪ ನದೋನಿ ವಿರುದ್ಧ ರಘುವನಹಳ್ಳಿ ನಿವಾಸಿ ಗಂಗಾಧರ ಸ್ವಾಮಿ ಎಂಬುವರು ದೂರು ನೀಡಿದ್ದು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಿಲ್ಸನ್ ಗಾರ್ಡನ್ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಆರೋಪಿ ಗಿರಿಧರ್, ‘ಹೈಕೋರ್ಟ್ನಲ್ಲಿ ವಾಹನ ಚಾಲಕರ ಹುದ್ದೆ ಖಾಲಿ ಇದೆ. ನನಗೆ ಗೊತ್ತಿರುವವರು ಅಲ್ಲಿದ್ದಾರೆ. ಅವರಿಗೆ ಹೇಳಿ ಕೆಲಸ ಕೊಡಿಸುವೆ’ ಎಂದು 33 ವರ್ಷದ ಗಂಗಾಧರಸ್ವಾಮಿ ಅವರನ್ನು ನಂಬಿಸಿದ್ದ. 2019ರ ಏಪ್ರಿಲ್ 20ರಿಂದ ಆಗಸ್ಟ್ 6 ಅವಧಿಯಲ್ಲಿ ಒಟ್ಟು ₹6.1 ಲಕ್ಷ ಹಣ ಕೂಡ ಪಡೆದುಕೊಂಡಿದ್ದ. ಒಂದು ತಿಂಗಳೊಳಗೆ ನೇಮಕಾತಿ ಪತ್ರ ಕೊಡಿಸುವುದಾಗಿಯೂ ಹೇಳಿದ್ದ’.
‘ಒಂದು ವರ್ಷವಾದರೂ ನೇಮಕಾತಿ ಪತ್ರ ಕೈಸೇರಿರಲಿಲ್ಲ. ಈ ಸಂಬಂಧ ಗಿರಿಧರ್ ಅವರನ್ನು ವಿಚಾರಿಸಿದಾಗ ಒಂದಲ್ಲ ಒಂದು ನೆಪ ಹೇಳಿ ದಿನ ದೂಡುತ್ತಲೇ ಇದ್ದ. ಇದರಿಂದ ಬೇಸತ್ತ ಗಂಗಾಧರ ಅವರು ಹಣವನ್ನು ಮರಳಿಸುವಂತೆ ಪಟ್ಟು ಹಿಡಿದಿದ್ದರು. ಆರೋಪಿಯು ಈ ವರ್ಷದ ಮಾರ್ಚ್ನಲ್ಲಿ ₹64 ಸಾವಿರ ಮರಳಿಸಿದ್ದ. ಉಳಿದ ₹5.4 ಲಕ್ಷ ಕೇಳಿದಾಗ ಆರೋಪಿ ಚೆಕ್ ನೀಡಿದ್ದ. ಅದು ಬೌನ್ಸ್ ಆಗಿತ್ತು. ಇದರಿಂದ ಬೇಸತ್ತ ಗಂಗಾಧರ ವಂಚನೆ ಪ್ರಕರಣ ದಾಖಲಿಸಿದ್ದರು’.
‘ಆರೋಪಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.