ADVERTISEMENT

ಕರ್ನಾಟಕ ಲೋಕಸಭಾ ಕ್ಷೇತ್ರ ದರ್ಶನ–3

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:19 IST
Last Updated 30 ಏಪ್ರಿಲ್ 2019, 15:19 IST
   

ಮಂಡ್ಯ ಲೋಕಸಭಾ ಕ್ಷೇತ್ರ ಚಿತ್ರನಟರ ಸ್ಪರ್ಧೆಯಿಂದ ಕುತೂಹಲದ ಕಣವಾಗಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪುತ್ರ, ನಟ ನಿಖಿಲ್‌ ಅವರನ್ನು ಗೆಲ್ಲಿಸಿಕೊಳ್ಳುವ ಪಣ ತೊಟ್ಟಿದ್ದಾರೆ. ಆದರೆ ಅಂಬರೀಷ್‌ ಪತ್ನಿ ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿರುವುದು ಜೆಡಿಎಸ್‌ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್‌ ಮುಖಂಡರು ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸುಮಲತಾ ಮುಂದಾಗಿದ್ದಾರೆ. ನಿಖಿಲ್‌– ಸುಮಲತಾ ಸ್ಪರ್ಧೆಯನ್ನು ಕಾದು ನೋಡಿ, ನಂತರ ಅಭ್ಯರ್ಥಿಯನ್ನು ಪ್ರಕಟಿಸಲು ಬಿಜೆಪಿನಿರ್ಧರಿಸಿದೆ.

2014ರಲ್ಲಿ ಸಿ.ಎಸ್. ಪುಟ್ಟರಾಜು ಅವರು ಜೆಡಿಎಸ್‌ನಿಂದ 5,518 ಮತಗಳ ಅಂತರದಿಂದ ಕಾಂಗ್ರೆಸ್‌ನ ರಮ್ಯಾ ಅವರನ್ನು ಸೋಲಿಸಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪುಟ್ಟರಾಜು ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯಿತು.

ಬೀದರ್‌: 2008ರ ವರೆಗೂ ಮೀಸಲು ಕ್ಷೇತ್ರವಾಗಿದ್ದ ಬೀದರ್‌ ಲೋಕಸಭಾ ಕ್ಷೇತ್ರವು ಪುನರ್‌ ವಿಂಗಡಣೆ ನಂತರ 2009ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ.

ADVERTISEMENT

2014ರ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಅವರು ಮೋದಿ ಅಲೆಯಲ್ಲಿ ಧರ್ಮಸಿಂಗ್ ವಿರುದ್ಧ ಗೆಲುವು ಸಾಧಿಸಿದ್ದರು. ಭಗವಂತ ಖೂಬಾ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ.

ಜೆಡಿಎಸ್–ಕಾಂಗ್ರೆಸ್‌ ಮಧ್ಯೆ ಚುನಾವಣೆ ಹೊಂದಾಣಿಕೆಯಾದರೆ ಬೀದರ್ ಕ್ಷೇತ್ರ ಕಾಂಗ್ರೆಸ್ ಪಾಲಾಗುವುದು ಸ್ಪಷ್ಟವಾಗಿದೆ. ಇಲ್ಲಿ ಜೆಡಿಎಸ್‌ನಲ್ಲಿ ಸದ್ಯ ಪ್ರಬಲ ಆಕಾಂಕ್ಷಿಗಳೇ ಇಲ್ಲ. ಕಾಂಗ್ರೆಸ್‌ನಲ್ಲಿ ಈಶ್ವರ ಖಂಡ್ರೆ, ಬಸವರಾಜ ಬುಳ್ಳಾ, ವಿಜಯ ಸಿಂಗ್‌ ಹಾಗೂ ಆಯಾಜ್‌ ಖಾನಾಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ.

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ. ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಸಂಸದ ಜಿ.ಎಂ. ಸಿದ್ದೇಶ್ವರ ನಾಲ್ಕನೇ ಬಾರಿಯೂ ಸ್ಪರ್ಧಿಸುವುದು ಖಚಿತ. ಮೂರು ಬಾರಿಯೂ ಸಿದ್ದೇಶ್ವರ ಅವರಿಗೆ ಎದುರಾಳಿಯಾಗಿದ್ದ ಎಸ್.ಎಸ್‌. ಮಲ್ಲಿಕಾರ್ಜುನ ಅವರನ್ನೇ ಮತ್ತೆ ಕಾಂಗ್ರೆಸ್ ಹೈಕಮಾಂಡ್ ಅವಲಂಬಿಸುವ ಸಾಧ್ಯತೆ ಇದೆ. ಜೆಡಿಎಸ್‌ಗೆ ಇಲ್ಲಿ ಹುರಿಯಾಳುಗಳೇ ಇಲ್ಲ. ಕಾಂಗ್ರೆಸ್‌–ಜೆಡಿಎಸ್‌ ನಡುವೆ ಹೊಂದಾಣಿಕೆಯಾದರೆ ಬಿಜೆಪಿಗೆ ಈ ಬಾರಿ ಕಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.