ಶಿರಸಿ: ಆಂತರಿಕವಾಗಿ ಕಾರ್ಯಕರ್ತರ ವಿರೋಧವಿದ್ದರೂ, ಟಿಕೆಟ್ ಖಚಿತಪಡಿಸಿಕೊಂಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೆ, ಕಾಂಗ್ರೆಸ್– ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ಗಾಗಿ ಕಚ್ಚಾಟ ಶುರುವಾಗಿದೆ.
ಇತ್ತೀಚೆಗೆ ಶಿರಸಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಅವರು ‘ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೆಂದು ನಿರ್ಧಾರವಾಗಿದೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅತ್ತ ಮಾಜಿ ಸಚಿವ ಆನಂದ ಅಸ್ನೋಟಿಕರ್ ಜೆಡಿಎಸ್ ಟಿಕೆಟ್ ತರಲು ಬೆಂಗಳೂರಿಗೆ ಎಡತಾಕುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು, ‘ಕ್ಷೇತ್ರದಲ್ಲಿ ದುರ್ಬಲವಾಗಿರುವ ಜೆಡಿಎಸ್ಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ, ನಿರ್ಣಯ ಕೈಗೊಂಡಿದ್ದಾರೆ.
‘ಜೆಡಿಎಸ್ ಬಲವಾಗಿರುವ ಹಾಸನದಲ್ಲಿ ನಾವು ಆ ಕ್ಷೇತ್ರವನ್ನು ಕೇಳಿಲ್ಲ. ಶಿವಮೊಗ್ಗದಲ್ಲಿ ನಮ್ಮ ಬಲವಿದ್ದರೂ ಜೆಡಿಎಸ್ಗೆ ಟಿಕೆಟ್ ಬಿಟ್ಟುಕೊಟ್ಟಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ಗೆ 4 ಲಕ್ಷ ಮತಗಳು ಬಂದಿದ್ದರೆ, ಜೆಡಿಎಸ್ ಪಡೆದಿದ್ದು 1.30 ಲಕ್ಷ ಮತಗಳನ್ನು ಮಾತ್ರ. ಇಷ್ಟು ದೊಡ್ಡ ಪ್ರಮಾಣದ ಮತದಾರರನ್ನು ಪರಿವರ್ತಿಸುವ ಶಕ್ತಿ ಜೆಡಿಎಸ್ಗೆ ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದಿರುವ ಅವರು, ‘ನನಗೆ ಪಕ್ಷ ಹಾಗೂ ಕಾರ್ಯಕರ್ತರು ಮುಖ್ಯ. ಅಧಿಕಾರಕ್ಕೆ ಅಂಟಿಕೊಂಡು ಕುಳಿತವನು ನಾನಲ್ಲ. ಸಂದರ್ಭ ಬಂದರೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಗೊತ್ತಿದೆ’ ಎನ್ನುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಮಾ.19ರಂದು ನಡೆಯುವ ಜಿಲ್ಲಾ ಸಮಾವೇಶದಲ್ಲಿ ಬಲ ಪ್ರದರ್ಶಿಸಲು ಕಾಂಗ್ರೆಸ್ ಸಜ್ಜಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.