ಮಧುಗಿರಿ: ಕಳೆದ ಭಾನುವಾರ ನಡೆಯಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ಕಿಂಗ್ ಪಿನ್’ ಶಿವಕುಮಾರ್ ಎಂಬುವವನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಸಿಬಿ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿಗೆ ಮಧುಗಿರಿ ಪಟ್ಟಣದಲ್ಲಿ ಗುರುವಾರ ಜಾಲಾಡಿದೆ.
ತಾಲ್ಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ಎಂಬುವವರ ಬಂಧನಕ್ಕೆ ಸಿಸಿಬಿ ತಂಡ ಬಂದಿತ್ತು. ಆದರೆ, ಪೊಲೀಸರು ಬರುವ ಸುಳಿವು ಅರಿತ ಮಹೇಶ್ ಪರಾರಿಯಾದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಮೀಪದಲ್ಲಿ ವಾಸವಾಗಿರುವ ನಿವಾಸಕ್ಕೆ ತೆರಳುವ ಮುನ್ನ ಸಿಸಿಬಿ ಪೊಲೀಸರು ಮಹೇಶ್ ಅವರ ಪತ್ನಿಯ ಮೊಬೈಲ್ಗೆ ಕರೆ ಮಾಡಿದ್ದಾರೆ. ಈ ಕರೆ ಬರುತ್ತಿದ್ದಂತೆಯೇ ಮಹೇಶ್ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಎಸ್ಪಿ ಹೇಳಿಕೆ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತಂಡ ಬೆಳಿಗ್ಗೆ ಭೇಟಿ ನೀಡಿತ್ತು. ವಿಚಾರಣೆಗೆ ಮಹೇಶ್ ಬಂಧಿಸಲು ಹೋದಾಗ ಆತ ಮನೆಯಲ್ಲಿ ಸಿಕ್ಕಿರಲಿಲ್ಲ. ಬಳಿಕ ತಂಡ ಹಿಂದಿರುಗಿತ್ತು. ಸಂಜೆ ದಾಬಸ್ ಪೇಟೆ ಬಳಿ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಎಸ್ಪಿ ಡಾ.ದಿವ್ಯಾ ಗೋಪಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.