ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಗೆ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದರು. ಆದರೆ, ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಆ ಪಕ್ಷದ ಹೈಕಮಾಂಡ್ ಎಲ್ಲ ಆಕಾಂಕ್ಷಿಗಳ ಬಾಯಿಯನ್ನು ಮುಚ್ಚಿಸಿದೆ. ಜಾಣ್ಮೆಯ ನಡೆಯ ಮೂಲಕ, ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶ ಆಗದಂತೆ ನೋಡಿಕೊಂಡಿದೆ.
ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಪಕ್ಷದ ಬಹುತೇಕರ ಆಶಯಗಳಿಗೆ ಪಕ್ಷ ಮನ್ನಣೆ ನೀಡಿದೆ. ಇದರೊಂದಿಗೆ ಟಿಕೆಟ್ ಫೈಟ್ನಲ್ಲಿ ಗೆದ್ದಿರುವ ಮಂಗಳಾ ಅವರು ಚುನಾವಣೆಯಲ್ಲಿ ಪೈಪೋಟಿ ತೋರಬೇಕಾಗಿದೆ. ಕಾಂಗ್ರೆಸ್ನಿಂದ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ಮಂಗಳಾ ಸ್ಪರ್ಧೆಯಿಂದಾಗಿ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಟ್ಟಿದ್ದು, ಚುನಾವಣಾ ಕಣ ರಂಗೇರಿದೆ.
ಬಿಜೆಪಿಯಲ್ಲಿನ ಟಿಕೆಟ್ ಆಕಾಂಕ್ಷಿಗಳು, ‘ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡಬೇಕು. ಬೇರೆಯವರಿಗೆ ಕೊಡುವುದಾದರೆ ನನಗೇ ಕೊಡಿ’ ಎಂದು ಹೈಕಮಾಂಡ್ ಮುಂದೆ ವಾದ ಮಂಡಿಸಿದ್ದರು. ಅಂಗಡಿ ಅವರ ಬೀಗರೂ ಆಗಿರುವ ಸಚಿವ ಜಗದೀಶ ಶೆಟ್ಟರ್ ಅವರು ಕೂಡ ಬೆಂಬಲವಾಗಿ ನಿಂತಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲೆಯ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಮೊದಲಾದವರು ಅಂಗಡಿ ಕುಟುಂಬಕ್ಕೆ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ ಎಂದಿದ್ದರು.
ಸುರೇಶ ಅಂಗಡಿ ಅವರು ಬದುಕಿದ್ದಾಗ ಮಂಗಳಾ ಅವರು ಸಾರ್ವಜನಿಕ ಜೀವನದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಗೃಹಿಣಿಯಾಗಿ ಮನೆಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಆದರೆ, ಮನೆಗೆ ಬರುತ್ತದ್ದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು. ಹೀಗಾಗಿಯೇ ಅಭಿಮಾನಿಗಳು, ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎಂಬ ಒತ್ತಾಯವನ್ನು ಮಾಡಿದ್ದರು. ಅದಕ್ಕೆ ಪಕ್ಷದಿಂದ ಮನ್ನಣೆ ನೀಡಲಾಗಿದೆ.
ಸತತ 4ನೇ ಬಾರಿಗೆ ಗೆದ್ದಿದ್ದ ಸುರೇಶ ಅಂಗಡಿ ಅವರ ಅನುಕಂಪದ ಅಲೆಯ ಲಾಭ ಪಡೆಯಲು ಹಾಗೂ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಲಿಂಗಾಯತ ಸಮಾಜದ ಮತಗಳ ಮೇಲೆ ಕಣ್ಣಿಟ್ಟು ದಾಳ ಉರುಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.