ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ರಾಜ್ಯದಲ್ಲಿ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮರಾಠಾ ಮೀಸಲಾತಿ ಅಭಿಯಾನದ ಅಧ್ಯಕ್ಷ ವಿಜೇಂದ್ರ ಜಾಧವ್ ಪಿ. ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಾಠಾ ಸಮುದಾಯವನ್ನು ಪ್ರವರ್ಗ ‘3ಬಿ’ ಯಿಂದ ಬದಲಾಯಿಸಿ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವಂತೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿ ವರದಿ ಸಲ್ಲಿಸಿದೆ. ಈ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಡಚಣೆಗಳಿಲ್ಲ. ತ್ವರಿತವಾಗಿ ಆದೇಶ ಹೊರಡಿಸುವ ಮೂಲಕ ಸಮುದಾಯದ ವಿದ್ಯಾರ್ಥಿ
ಗಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಾಠಾ ಸಮುದಾಯದ ಜನರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಆದೇಶಿಸಿ
ದ್ದರು. ಈವರೆಗೂ ನಿಗಮ ಅಸ್ತಿತ್ವಕ್ಕೆ ಬಂದಿಲ್ಲ. ಗಣರಾಜ್ಯ ದಿನವಾದ ಜನವರಿ 26ರೊಳಗೆ ಮರಾಠಾ ಸಮುದಾಯದ ಅಭಿವೃದ್ಧಿ ನಿಗಮವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಆಗ್ರಹಿಸಿದರು.
ಮರಾಠಾ ಸಮುದಾಯದ ಜನರು ಕನ್ನಡಿಗರಾಗಿ ಈ ರಾಜ್ಯದಲ್ಲಿ ಬದುಕುತ್ತಿದ್ದಾರೆ. ವಾಟಾಳ್ ನಾಗರಾಜ್ ಏಕೆ ನಿಗಮ ಸ್ಥಾಪನೆಯನ್ನು ವಿರೋಧಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಿಗಮ ಸ್ಥಾಪನೆಯಿಂದ ಕನ್ನಡ, ಕನ್ನಡಿಗರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಅವರ ಆತಂಕ ನಿಜವೇ ಆಗಿದ್ದಲ್ಲಿ ನಿಗಮ ಸ್ಥಾಪಿಸುವುದೇ ಬೇಡ ಎಂದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಆಡಳಿತ ಮಂಡಳಿ ನಿರ್ದೇಶಕ ಭವಾನಿರಾವ್, ಮರಾಠಾ ಮೀಸಲಾತಿ ಅಭಿಯಾನದ ಮುಖಂಡರಾದ ಶ್ರೀನಿವಾಸ ರಾವ್ ಕಾಳೆ, ಅನಿಲ್ ಚೌಹಾಣ್ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.