ಚಿತ್ರದುರ್ಗ: ಸಾಹಿತಿ ಕುಂ.ವೀರಭದ್ರಪ್ಪ ಅವರ ಪುತ್ರ ಪ್ರವರ ಹಾಗೂ ಅಂಬಿಕಾ ಅಂತರ್ಜಾತಿ ವಿವಾಹ ಇಲ್ಲಿನ ಮುರುಘಾ ಮಠದಲ್ಲಿ ಬುಧವಾರ ನೆರವೇರಿತು.
29ನೇ ವರ್ಷದ 6ನೇ ತಿಂಗಳ ಸಾಮೂಹಿಕ ವಿವಾಹದಲ್ಲಿ 45 ಜೋಡಿಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸರಳತೆಯನ್ನು ಸಾರಿದರು.
ಹೊಸದುರ್ಗದ ಎಸ್.ನಿಜಲಿಂಗಪ್ಪ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರವರ ಹಾಗೂ ಅಂಬಿಕಾ ವಚನ ಮಾಂಗಲ್ಯವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು.
‘ಬಸವತತ್ವದ ಆಧಾರದ ಮೇಲೆ ವಿವಾಹವಾಗಬೇಕು ಎಂಬ ಇಚ್ಛೆ ಮನಸ್ಸಿನಲ್ಲಿತ್ತು. ಪ್ರಜ್ಞಾಪೂರ್ವಕವಾಗಿ ಸರಳ ವಿವಾಹವಾಗಿದ್ದೇವೆ. ಶಿಕ್ಷಣ ಹಾಗೂ ತಂದೆಯೇ ಇದಕ್ಕೆ ಪ್ರೇರಣೆ. ಪರಿಸರ ದಿನದಂದೇ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಖುಷಿಯನ್ನು ಹೆಚ್ಚಿಸಿದೆ’ ಎಂದು ಸಂತಸ ಹಂಚಿಕೊಂಡರು ಪ್ರವರ.
‘ಯಾರನ್ನೋ ಮೆಚ್ಚಿಸಲಿಕ್ಕೆ ಇಂತಹ ವಿವಾಹ ಮಾಡಿಕೊಂಡಿಲ್ಲ. ಇಬ್ಬರು ಚರ್ಚಿಸಿ, ಪರಸ್ಪರ ಒಪ್ಪಿ ಸರಳ ವಿವಾಹವಾಗಿದ್ದೇವೆ. ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದು ಸಂಭ್ರಮ ಹೆಚ್ಚಿಸಿದೆ’ ಎಂದು ಅಭಿಪ್ರಾಯ ಹಂಚಿಕೊಂಡರು ಅಂಬಿಕಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.