ADVERTISEMENT

ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ: ಬಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 15:32 IST
Last Updated 10 ಫೆಬ್ರುವರಿ 2020, 15:32 IST

ಬೆಳಗಾವಿ: ‘ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ಆ ಹುದ್ದೆ ಕೊಟ್ಟರೂ ನಿಭಾಯಿಸುತ್ತೇನೆ’ ಎಂದು ಅರಣ್ಯ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶಾಸಕ, ಮಂತ್ರಿ ಮತ್ತು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ನಾನೇನೂ ಸನ್ಯಾಸಿಯಲ್ಲ. ನನಗೂ ಆಸೆ ಇದೆ. ಮುಂಚೆ ಪೊಲೀಸ್ ಅಧಿಕಾರಿಯಾಗಿದ್ದೆ. ಬಳಿಕ ಶಾಸಕನಾದೆ. ಈಗ, ಮಂತ್ರಿ ಆಗಿದ್ದೇನೆ. ಆದರೆ, ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ’ ಎಂದು ತಿಳಿಸಿದರು.

ತಮ್ಮ ವಿರುದ್ಧ ಟೀಕಿಸಿರುವ ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ‘ಅವರು ಏನೇನೋ ಮಾತನಾಡುತ್ತಾರೆ. ಕಾನೂನು ಕಲಿತ ಅವರು, ಒಮ್ಮೊಮ್ಮೆ ಗೊತ್ತಿಲ್ಲ ಎನ್ನುತ್ತಾರೆ. ಕಾನೂನು ಗೊತ್ತಿಲ್ಲವಾಗಿದ್ದರೆ ನಾನು 25 ವರ್ಷ ಪೊಲೀಸ್ ಅಧಿಕಾರಿಯಾಗಿರಲು ಸಾಧ್ಯವಿತ್ತಾ? ಪೊಲೀಸರು ಆರೋಪಿ ಬಂಧಿಸಿದ ನಂತರವೇ ವಕೀಲರ ಕೆಲಸ ಆರಂಭವಾಗುತ್ತದೆ’ ಎಂದರು.

ADVERTISEMENT

‘ನಾವು ಸಿದ್ದರಾಮಯ್ಯ ಸಂತೋಷಕ್ಕೆ ಮಂತ್ರಿ ಆಗಿಲ್ಲ. ಜನತಾ ನ್ಯಾಯಾಲಯದಲ್ಲಿ ನಾವು ಅರ್ಹರಾಗಿದ್ದೇವೆ. ನಮ್ಮನ್ನು ಟೀಕಿಸುವುದು ಮತದಾರರಿಗೆ ಅವಮಾನ ಮಾಡಿದಂತಾಗುತ್ತದೆ’ ಎಂದರು.

‘ಮಹೇಶ ಕುಮಠಳ್ಳಿ ಅವರಿಗೆ ಮಂತ್ರಿ ಸ್ಥಾನ ನೀಡದಿರುವುದರಿಂದ ನೋವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಒಮ್ಮೆ ಕಾಂಗ್ರೆಸ್‌ಗೇ ಬೈತಾರೆ. ಅಧಿಕಾರ ಕೊಟ್ಟರೆ ಹೊಗಳುತ್ತಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರನ್ನು ಜನರು ಭದ್ರಾವತಿಯಿಂದ ಓಡಿಸಿದ್ದಾರೆ. ಎಲ್ಲಿಯೂ ಅವರಿಗೆ ಮನ್ನಣೆ ಸಿಕ್ಕಿಲ್ಲ. ಕಾಂಗ್ರೆಸ್‌ನವರು ಜೋಕರ್ ರೀತಿ ಇರಲೆಂದು ಇಟ್ಟುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಉಪ ಮುಖ್ಯಮಂತ್ರಿ ಬಗ್ಗೆ ನಮ್ಮ ಗುಂಪಿನಲ್ಲಿ ಚರ್ಚೆಯಾಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.