ಬೆಳಗಾವಿಯಲ್ಲಿ ಮಂಗಳವಾರ ನಡೆದ ‘ಕಾಹೆರ್’ನ 15ನೇ ಘಟಿಕೋತ್ಸವದಲ್ಲಿ ಕುಲಾಧಿಪತಿ ಪ್ರಭಾಕರ ಕೋರೆ ಅವರು ಮುಂಬೈನ ಟಾಟಾ ಮೆಮೋರಿಯಲ್ ಕೇಂದ್ರದ ಉಪನಿರ್ದೇಶಕ ಡಾ.ಶೈಲೇಶ ವಿ. ಶ್ರೀಖಂಡೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಿದರು. ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಹಾಗೂ ಪ್ರಲ್ಹಾದ್ ಜೋಶಿ ಕೂಡ ಪಾಲ್ಗೊಂಡರು ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ನೀತಿಯಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ. ದಶಕದ ಹಿಂದೆ ವರ್ಷಕ್ಕೆ 51 ಸಾವಿರ ವೈದ್ಯರು ಮಾತ್ರ ತಯಾರಾಗುತ್ತಿದ್ದರು. ಈಗ 1.08 ಲಕ್ಷಕ್ಕೂ ಹೆಚ್ಚು ವೈದ್ಯರು ಸಿದ್ಧಗೊಳ್ಳುತ್ತಿದ್ದಾರೆ. ದೇಶ ಆರೋಗ್ಯಯುತವಾಗಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ.ನಡ್ಡಾ ಹೇಳಿದರು.
ಇಲ್ಲಿನ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಸೆಂಟೆನರಿ ಹಾಲ್ನಲ್ಲಿ ಮಂಗಳವಾರ ನಡೆದ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ (ಕಾಹೆರ್)ನ 15ನೇ ಘಟಿಕೋತ್ಸವ ಭಾಷಣ ಮಾಡಿದರು.
‘ನರೇಂದ್ರ ಮೋದಿ ಅವರ ಸರ್ಕಾರ ಬಂದ ಮೇಲೆ ಮೊದಲ ಕ್ರಾಂತಿ ವೈದ್ಯಕೀಯ ಶಿಕ್ಷಣದಲ್ಲೇ ನಡೆಯಿತು. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ಹಾಗೂ ರೋಗ ನಿವಾರಣೆ ಮಾಡುವ ವಿಧಾನಗಳಿಗೆ ಹೊಸ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಹಿಂದೆ ಭಾರತದ ಪ್ರತಿಭೆಗಳು ಹೊರದೇಶಕ್ಕೆ ಹೋಗುತ್ತಿದ್ದವು. ಇಂದು ನಾವೇ ಸಾಕಷ್ಟು ಅವಕಾಶಗಳನ್ನು ಸೃಷ್ಟಿ ಮಾಡಿದ್ದರಿಂದ ಇಲ್ಲೇ ಕಲಿತು, ಇಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
‘ಭಾರತದ ವೈದ್ಯಕೀಯ ಸ್ಥಿತಿ–ಗತಿಯನ್ನು ಬೇರೆ ಯಾವುದೇ ದೇಶಕ್ಕೆ ತುಲನೆ ಮಾಡಿ ನೋಡಬೇಡಿ. 140 ಕೋಟಿ ಜನರನ್ನು ನಿಭಾಯಿಸುವ ದೊಡ್ಡ ದೇಶ ನಮ್ಮದು. ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಿಗೂ ಗುಣಮಟ್ಟದ ವೈದ್ಯರ ಅಗತ್ಯವಿದೆ. ಆದರೆ, ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚು ಯುವಜನರು ಇದ್ದಾರೆ. ಅವರು ದೇಶಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬಲ್ಲರು. ಅವರಿಗೆ ಬೇಕಾದ ಅವಕಾಶಗಳನ್ನು ಕೇಂದ್ರವು ನಿರ್ಮಾಣ ಮಾಡಿದೆ’ ಎಂದು ಅವರು ಹೇಳಿದರು.
‘ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಪದ್ಧತಿ ಸೇರಿದಂತೆ ಎಲ್ಲವನ್ನೂ ಒಂದಕ್ಕೊಂದು ಪೂರಕವಾಗಿ ಬೆಳೆಸುವ ನಿರ್ಧಾರ ಮಹತ್ವದ್ದು. ಒಂದು ವೈದ್ಯಕೀಯ ಪದ್ಧತಿ ಇನ್ನೊಂದು ಪದ್ಧತಿಗೆ ಸಂಬಂಧವೇ ಇಲ್ಲ ಎಂಬಂಥ ವಾತಾವರಣ ಬೆಳವಣಿಗೆಗೆ ಪೂರಕವಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.
‘ಕಲಿಕೆ ಎಂಬುದು ಎಂದೂ ಮುಗಿಯುವುದಿಲ್ಲ. ಅದು ಎಂದು ಮುಗಿಯುತ್ತದೆ ಎಂದು ನಮಗೆ ಅನಿಸುತ್ತದೆಯೋ ಅಲ್ಲಿಗೆ ನಮ್ಮ ಕತೆಯೂ ಮುಗಿದಿದೆ ಎಂದರ್ಥ. ವೈದ್ಯರಾದ ಮೇಲೆ ಕಲಿಕೆ ನಿಲ್ಲಿಸಬೇಡಿ. ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅಂತ್ಯವೇ ಇಲ್ಲ ಎಂಬಷ್ಟು ಸಂಶೋಧನೆಗಳು ಬರುತ್ತಿವೆ. ನಿಮ್ಮ ಸಂಶೋಧನಾ ಮನೋಭಾವ ದೇಶವನ್ನು ಮುನ್ನಡೆಸುತ್ತದೆ ಎಂಬುದನ್ನು ಮರೆಯಬೇಡಿ’ ಎಂದೂ ಕಿವಿಮಾತು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ‘ದೇಶದಲ್ಲಿ 1.75 ಲಕ್ಷ ಆಯುಷ್ಮಾನ್ ಆರೋಗ್ಯ ಕೆಂದ್ರಗಳನ್ನು ಸ್ಥಾಪಿಸಲಾಗಿದೆ. 319 ವೈದ್ಯಕೀಯ ಮಹಾವಿದ್ಯಾಲಯಗಳಿದ್ದವು. ಈಗ ಇವುಗಳ ಸಂಖ್ಯೆ 706ಕ್ಕೆ ಏರಿದೆ. ಎಂಬಿಬಿಎಸ್ ಹಾಗೂ ಸ್ನಾತ್ತಕೋತ್ತರ ಸೀಟುಗಳಲ್ಲಿ ಶೇ 130ರಷ್ಟು ಹೆಚ್ಚಳವಾಗಿದೆ’ ಎಂದರು.
ಮುಂಬೈನ ಟಾಟಾ ಮೆಮೋರಿಯಲ್ ಕೇಂದ್ರದ ಉಪನಿರ್ದೇಶಕ ಡಾ.ಶೈಲೇಶ ವಿ. ಶ್ರೀಖಂಡೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಯಿತು. ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳ 1,844 ವಿದ್ಯಾರ್ಥಿಗಳಿಗೆ ಪದವಿ, 35 ಮಂದಿಗೆ ಚಿನ್ನದ ಪದಕ ನೀಡಲಾಯಿತು.
ಕಾಹೆರ್ ಕುಲಾಧಿಪತಿ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪದವಿಗಳನ್ನು ಪ್ರದಾನ ಮಾಡಿದರು. ಕುಲಪತಿ ಡಾ.ನಿತಿನ್ ಗಂಗಾಣೆ, ಕುಲಸಚಿವ ಡಾ.ಎಂ.ಎಸ್. ಗಣಾಚಾರಿ ಹಾಗೂ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಡಾ.ಚಂದ್ರಾ ಮೆಟಗುಡ್ಡ ವೇದಿಕೆ ಮೇಲಿದ್ದರು.
ಚಿನ್ನ ಬಾಚಿಕೊಂಡ ಮೇಜರ್ ಪ್ರಿತಿಕಾ
ಭಾರತೀಯ ಸೇನೆಯಲ್ಲಿ ಏಳು ವರ್ಷ ಮೆಡಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದ ಪಂಜಾಬ್ನ ಪಠಾಣಕೋಟ್ ಮೂಲದ ಮೇಜರ್ ಡಾ.ಪ್ರಿತಿಕಾ ಪಾಂಚಾಲಿ ಅವರು ‘ರೆಡಿಯೊ ಡೈಗ್ನಾಸಿಸ್ (ಎಂ.ಡಿ)’ನಲ್ಲಿ ಚಿನ್ನದ ಪದಕ ಪಡೆದು, ಗಮನ ಸೆಳೆದರು.
ಸೇನೆಯಲ್ಲಿ ಸೇವೆ ಸಲ್ಲಿಸಿ, ಹೆಚ್ಚಿನ ಶಿಕ್ಷಣಕ್ಕಾಗಿ ಬೆಳಗಾವಿಗೆ ಬಂದ ಅವರಿಗೆ ಚಪ್ಪಾಳೆಗಳ ಸುರಿಮಳೆಯಿಂದ ಅಭಿನಂದಿಸಲಾಯಿತು.
‘ನನ್ನ ಪತಿ ಕೂಡ ಸೇನೆಯಲ್ಲಿ ವೈದ್ಯಾಧಿಕಾರಿ ಆಗಿದ್ದಾರೆ. ಹೆಚ್ಚಿನ ಕಲಿಕೆಗಾಗಿ ನಾನು ಬಿಟ್ಟು ಬಂದಿದ್ದೇನೆ. ಸೇನೆಯಲ್ಲಿ ವೈದ್ಯರಾಗುವುದಕ್ಕೂ, ಸಮಾಜದಲ್ಲಿ ವೈದ್ಯರಾಗುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎರಡೂ ಕಡೆಯ ಸವಾಲುಗಳು ಬೇರೆಬೇರೆ’ ಎಂದು ಪ್ರಿತಿಕಾ ಹೇಳಿದರು.
ರೈತನ ಮಗಳಿಗೆ ನಾಲ್ಕು ಚಿನ್ನದ ಪದಕ
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ, ಕೆಎಲ್ಇ ಬಿ.ಎಂ.ಕಂಕಣವಾಡಿ ಆರ್ಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ.ಶ್ವೇತಾ ಗೋರೆ ಅವರು 4 ಚಿನ್ನದ ಪದಕ ಪಡೆಯುವ ಮೂಲಕ ವಿ.ವಿಗೆ ಮೊದಲಿಗರಾದರು.
ತಂದೆ ರಾಜಶೇಖರ– ತಾಯಿ ಶ್ರೀದೇವಿ ಕೃಷಿಕರಾಗಿದ್ದಾರೆ. ‘ಆರು ಎಕರೆ ಜಮೀನಿನಲ್ಲಿ ಅಪ್ಪ ಕೃಷಿ ಮಾಡುತ್ತಿದ್ದರು. ನಾನು ವೈದ್ಯೆಯಾಗುತ್ತೇನೆ ಎಂದಾಗ ಹೆದರಿದ್ದರು. ಪ್ರಭಾಕರ ಕೋರೆ ಅವರು ನೀಡಿದ ಸಹಾಯ ಹಾಗೂ ಪ್ರೋತ್ಸಾಹದಿಂದ ನನ್ನ ಕನಸು ಈಡೇರಿದೆ. ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ’ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.