ಬೆಂಗಳೂರು: ರಾಜ್ಯದಲ್ಲಿನ ‘ಮೀ–ಟೂ’ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಧ್ವನಿ ಎತ್ತಲು ಧೈರ್ಯ ತುಂಬಬೇಕು ಎಂದು ಸಮಾನ ಮನಸ್ಕರ ನಿಯೋಗ, ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದೆ.
ಸಾಮಾಜಿಕ ಕಾರ್ಯಕರ್ತರಾದ ಗೌರಮ್ಮ, ಕೆ.ಎಸ್.ವಿಮಲಾ, ಅಖಿಲಾ ವಿದ್ಯಾಸಂದ್ರ, ಪತ್ರಕರ್ತ ದಿನೇಶ್ ಅಮಿನ್ಮಟ್ಟು ಅವರನ್ನು ಒಳಗೊಂಡ ನಿಯೋಗ, ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ‘ಸೂಕ್ತ ಕ್ರಮ ಕೈಗೊಳ್ಳುವುದಾಗಿ’ ಅಧ್ಯಕ್ಷೆ ಭರವಸೆ ನೀಡಿದರು. ‘ದೌರ್ಜನ್ಯದಬಗ್ಗೆ ಮಾತನಾಡುತ್ತಿರುವ ಮಹಿಳೆಯರ ವಿರುದ್ಧ ಆಕ್ರಮಣಕಾರಿ ಹೇಳಿಕೆ, ಪ್ರತ್ಯಾರೋಪ, ವ್ಯಂಗ್ಯ, ಕುಹಕಗಳ ಮೂಲಕ ಚಾರಿತ್ರ್ಯ ಹನನ ಮಾಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಬೆಳಕಿಗೆ ತರುತ್ತಿರುವ ಮಹಿಳೆಯರಿಗೆ ಆಯೋಗ ಬಹಿರಂಗವಾಗಿ ಬೆಂಬಲ ಸೂಚಿಸಬೇಕು’ ಎಂದು ನಿಯೋಗ ಕೋರಿದೆ.
ನಟ ಸರ್ಜಾ ವಿರುದ್ಧದ ತನಿಖೆಗೆ ಕ್ರಮ ವಹಿಸುವಂತೆ ವಿನಂತಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.