ಬೆಂಗಳೂರು: ‘ಹಾಲಿನ ಖರೀದಿ ದರ ಏರಿಸಬೇಕೆಂದು ರೈತರು ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ. ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದೆ. ಎಷ್ಟು ಏರಿಸಬೇಕೆಂದು ತೀರ್ಮಾನವಾಗಿಲ್ಲ. ಜೂನ್ ತಿಂಗಳಲ್ಲಿ ದರ ಏರಿಕೆ ಮಾಡಲಾಗುವುದು’ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಇಂಡಿಯನ್ ಡೇರಿ ಅಸೋಸಿಯೇಷನ್ ಶನಿವಾರ ನಿಮ್ಹಾನ್ಸ್ ಕನ್ವೆನ್ಷನ್ ಕೇಂದ್ರದಲ್ಲಿ ಆಯೋಜಿಸಿದ್ದ ಅತ್ಯುತ್ತಮ ಮಹಿಳಾ ಹೈನುಗಾರಿಕಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಹಾಲಿನ ಖರೀದಿ ದರ ಹೆಚ್ಚಿಸುವ ಕುರಿತು ಒಕ್ಕೂಟಗಳ ಮುಖಂಡರೊಂದಿಗೆ ಚರ್ಚಿಸಲಾಗುತ್ತದೆ. ನಂತರ ಮುಖ್ಯಮಂತ್ರಿಯವರೊಂದಿಗೂ ಮಾತನಾಡಿ, ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಸಚಿವರು, ‘ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ರೈತರಿಗೆ ಕೃಷಿಯಷ್ಟೇ, ಹೈನುಗಾರಿಕೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೈನುಗಾರಿಕೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಡಿಂಕ ಗ್ರಾಮದ ಮಂಗಳಮ್ಮ, ಕೇರಳದ ಕೊಟ್ಟಾಯಂ ಜಿಲ್ಲೆೆಯ ಮುಟ್ಟುಚಿರಾ ಗ್ರಾಮದ ವಿಧು ರಾಜೀವ್, ತೆಲಂಗಾಣದ ಜಗಿತ್ಯಾಲ್ ಗ್ರಾಮಾಂತರ ಜಿಲ್ಲೆೆಯ ಸಂಗಟಪಲ್ಲಿ ಗ್ರಾಮದ ಪುಢಾರಿ ಗಂಗವ್ವ, ಚಿತ್ತೂರು ಜಿಲ್ಲೆೆಯ ಮದ್ದಿರಾಳ ಗ್ರಾಮದ ನವೀನ ಕುಮಾರಿ, ತಮಿಳುನಾಡಿನ ತಿರುಪುರ್ ಜಿಲ್ಲೆೆಯ ಕೊಡಗಿಪಾಳ್ಯಂ ಗ್ರಾಮದ ಸೆಲ್ವನಾಯಕಿ ಅವರಿಗೆ ‘ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ’ಯನ್ನು ಸಚಿವರು ಪ್ರದಾನ ಮಾಡಿದರು.
ಇಂಡಿಯನ್ ಡೇರಿ ಅಸೋಸಿಯೇಷನ್ನ ದಕ್ಷಿಣ ವಲಯದ ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ, ಕೆಎಂಎಫ್ ನಿರ್ದೇಶಕ ಬಿ.ಶಿವಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.