ADVERTISEMENT

ಮಳೆ ಅವಘಡಕ್ಕೆ ಸಚಿವ ಅಶೋಕ ನೇರ ಹೊಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:37 IST
Last Updated 26 ಅಕ್ಟೋಬರ್ 2020, 20:37 IST

ಬೆಂಗಳೂರು: 'ನಗರದ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರ, ಸುಬ್ರಹ್ಮಣ್ಯ ನಗರ ವಾರ್ಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ಹಾನಿಗೆ ಸಚಿವ ಆರ್.ಅಶೋಕ ಅವರೇ ನೇರ ಹೊಣೆ' ಎಂದು ಆಮ್ ಆದ್ಮಿ ಪಕ್ಷದ (ಆಪ್) ಮಾಧ್ಯಮ ಸಂಚಾಲಕ ಜಗದೀಶ್ ವಿ. ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,' ಉತ್ತರಹಳ್ಳಿ ಹಾಗೂ ಪದ್ಮನಾಭನಗರ ಕ್ಷೇತ್ರಗಳಿಂದ ಗೆಲುವು ಸಾಧಿಸಿ 6 ಬಾರಿ ಶಾಸಕರಾಗಿರುವ ಆರ್.ಅಶೋಕ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಬಿಲ್ಡರ್ ಗಳ ಜತೆ ಸೇರಿ ಹೊಸಕೆರೆಹಳ್ಳಿ, ಗೌಡಯ್ಯನ ಕೆರೆ, ಚಿಕ್ಕಲ್ಲಸಂದ್ರ ಕೆರೆ ವ್ಯಾಪ್ತಿಯ ರಾಜಕಾಲುವೆ, ಕೆರೆ ಜಾಗ ಒತ್ತುವರಿಯಿಂದ ಅಕ್ರಮ ಬಡಾವಣೆ ನಿರ್ಮಿಸಿ, ಮಾರಾಟ ಮಾಡಿದ್ದಾರೆ. ಇದರಿಂದಾಗಿ, ಜನರು ಪ್ರತಿ ವರ್ಷ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಅಶೋಕ ಅವರೊಂದಿಗೆ ಗುರುತಿಸಿಕೊಂಡಿರುವ ಡಿ.ವೆಂಕಟೇಶ ಮೂರ್ತಿ, ಶ್ರೀನಿವಾಸ್ ಹಾಗೂ ಇನ್ನೂ ಹಲವರು ಈ ಸಮಸ್ಯೆಗೆ ಕಾರಣರಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 20 ವರ್ಷಗಳ ಭೂ ದಾಖಲೆಯನ್ನು ಪರಿಶೀಲಿಸಿ, ಭೂಗಳ್ಳರಾಗಿರುವ ಬಿಲ್ಡರ್ ಗಳು ಹಾಗೂ ಸಚಿವ ಅಶೋಕ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇವರ ಮೇಲೆ ಐಟಿ ಹಾಗೂ ಇಡಿ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.