ಬೆಂಗಳೂರು: 'ಈ ಹಿಂದಿನ ಸರ್ಕಾರದ ಯೋಜನೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ನಾವೇ ಆರೋಪ ಮಾಡಿದ್ದೆವು. ಅದೆಲ್ಲವನ್ನೂ ಪರಿಶೀಲನೆ ಮಾಡ್ತೇವೆ. ಯಾರ ಮೇಲೂ ಸೇಡು ತೀರಿಸಿ ಕೊಳ್ಳುವುದಕ್ಕಾಗಿಯಲ್ಲ. ಆದರೆ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ತನಿಖೆ ನಡೆಸುವ ಕುರಿತು ಗಮನಹರಿಸುತ್ತೇವೆ' ಎಂದು ನೂತನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ನಮ್ಮ ಇಲಾಖೆಯಲ್ಲಿ ಸಾಕಷ್ಟು ಸವಾಲುಗಳಿವೆ. ಇದನ್ನು ಖಂಡಿತ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಜನರಿಗೆ ಸಮಾಧಾನವಾಗುವ ರೀತಿಯಲ್ಲಿ ಕೆಲಸ ಮಾಡ್ತೇನೆ' ಎಂದರು.
'ಎಲ್ಲೆಲ್ಲಿ ಲೋಪಗಳಾಗುತ್ತವೆ ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ಪರಿಶೀಲನಾ ಸಭೆ ಮಾಡ್ತೇನೆ. ಬಳಿಕ ಸುಧಾರಣೆಯ ಬಗ್ಗೆ ಮಾಹಿತಿ ನೀಡ್ತೇನೆ' ಎಂದರು.
'ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ವಿಚಾರದ ಬಗ್ಗೆಯೂ ಇಲಾಖಾಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಹಿಂದೆ ಏನೇನಾಗಿದೆ, ಮುಂದೆ ಏನಾಗಬೇಕು ಎಂದು ಅರಿಯಲು ಈ ಸಭೆ ಕರೆದಿದ್ದೇನೆ. ಆರೋಗ್ಯ ಇಲಾಖೆಯ ಕೆಲಸದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ.ಆರೋಗ್ಯ ಸೇವೆ ಸರಿಯಾದ ರೀತಿ ಮಾಡಬೇಕಿದೆ. ಉತ್ತಮಗೊಳಿಸುವ ಸುಧಾರಣೆ ಮಾಡಬೇಕಾಗಿದೆ.ಮಹತ್ತರ ಜವಾಬ್ದಾರಿಯನ್ನು ಮುಖ್ಯಮಂತ್ರಿ ನನಗೆ ವಹಿಸಿದ್ದಾರೆ. ಈ ಬಗ್ಗೆ ಗಮನಹರಿಸುತ್ತೇನೆ' ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.