ಮಾಲೂರು (ಕೋಲಾರ): ‘ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನ್ಯಾಯಾಲಯಕ್ಕೆ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟವಾಗಲಿದೆ, ಎರಡು ವರ್ಷ ಶಿಕ್ಷೆಯಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ದಾಖಲೆ ಒದಗಿಸದ ಕಾರಣ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಬಂತು, ಸಮನ್ಸ್ ಬಂದೂ ದಾಖಲೆ ಕೊಡದಿದ್ದರಿಂದ ವಾರಂಟ್ ಬಂತು. ಆರೋಪ ಮಾಡುವುದು ಸುಲಭ. ಬಳಿಕ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯೂ ಇರಬೇಕು. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದೆಲ್ಲಾ ಮಾಡುವೆ’ ಎಂದರು.
‘ಶೇ 40ರಷ್ಟು ಕಮಿಷನ್ ಯಾರು ಕೇಳಿದ್ದಾರೆ? ರಾಜರಾಜೇಶ್ವರಿ ಕ್ಷೇತ್ರದಲ್ಲಿ ₹ 10 ಸಾವಿರ ಕೋಟಿ ಎಲ್ಲಿ ಖರ್ಚು ಆಗಿದೆ ತೋರಿಸಬೇಕು. ದಾಖಲೆ ತೋರಿಸುವವರೆಗೂ ನಾನು ಬಿಡುವುದಿಲ್ಲ. ಆದಷ್ಟು ಬೇಗ ಈ ಪ್ರಕರಣ ಮುಗಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸುವೆ. ಖಂಡಿತವಾಗಲೂ ಹೇಳುತ್ತಿರುವೆ ದಾಖಲೆ ಕೊಡದಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಕೆಂಪಣ್ಣ ಅವರು ಸಿದ್ದರಾಮಯ್ಯ ಅವರ ಮಾತು ಕೇಳುತ್ತಾರೆ. ಹೀಗಾಗಿ, ಎಲ್ಲಾ ದಾಖಲೆ ಕೊಟ್ಟು ಅಧಿವೇಶನದಲ್ಲಿ ಧ್ವನಿ ಎತ್ತಲು ಅವರಿಗೆ ಹೇಳಲಿ’ ಎಂದು ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.