ಬೆಂಗಳೂರು: ರಾಜ್ಯದಲ್ಲಿ 2.98 ಲಕ್ಷ ಮಕ್ಕಳು (ಎರಡು ವರ್ಷದೊಳಗಿನವರು) ಚುಚ್ಚುಮದ್ದಿನಿಂದ ಇನ್ನೂ ವಂಚಿತರಾಗಿ ಉಳಿದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 15.95 ಲಕ್ಷ ಮಕ್ಕಳು ಚುಚ್ಚುಮದ್ದಿನಿಂದ ವಂಚಿತರಾಗಿದ್ದರು. 2015ರಿಂದ ಈವರೆಗೆ ಕೇಂದ್ರ ಸರ್ಕಾರದ ‘ಮಿಷನ್ ಇಂದ್ರ ಧನುಷ್’ ಯೋಜನೆಯ ಮೂಲಕ 12.96 ಲಕ್ಷ ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ.
ಗರ್ಭಿಣಿಯರು: ರಾಜ್ಯದಲ್ಲಿ ಗರ್ಭಿಣಿಯರೂ ಚುಚ್ಚುಮದ್ದಿನಿಂದ ವಂಚಿತರಾಗಿದ್ದಾರೆ. 29.50 ಲಕ್ಷ ಜನರಲ್ಲಿ 25.89 ಲಕ್ಷ ಗರ್ಭಿಣಿಯರಿಗೆ ಮಾತ್ರ ಚುಚ್ಚುಮದ್ದು ನೀಡಲಾಗಿದೆ.
‘2015ರಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಚುಚ್ಚುಮದ್ದಿನಿಂದ ವಂಚಿತರಾದ ಮಕ್ಕಳನ್ನು ಗುರುತಿಸಲಾಯಿತು. ಅವರು ಯಾವ ಚುಚ್ಚುಮದ್ದಿನಿಂದ ವಂಚಿತರಾಗಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಂಡು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಗುರಿ ತಲುಪಿದ್ದೇವೆ. ಮುಂದಿನ ದಿನಗಳಲ್ಲಿ ಪೂರ್ಣ ಗುರಿ ಮುಟ್ಟಲಿದ್ದೇವೆ’ ಎಂದು ಆರೋಗ್ಯ ಇಲಾಖೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ರಜನಿ ಹೇಳಿದರು.
ಏನಿದು ಮಿಷನ್ ಇಂದ್ರ ಧನುಷ್ ಯೋಜನೆ?
ಒಂದು ಬಿಸಿಜಿ, ಮೂರು ಪೆಂಟಾವಲೆಂಟ್, ಮೂರು ಪೋಲಿಯೊ, ಒಂದು ರುಬೆಲ್ಲಾ (ಎಂ.ಆರ್) ಚುಚ್ಚುಮದ್ದುಗಳನ್ನು ಎರಡು ವರ್ಷದೊಳಗಿನ ಮಕ್ಕಳಿಗೆ ಕೊಡುವುದು ಕಡ್ಡಾಯ. ಆದರೆ ಇವುಗಳಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಚುಚ್ಚುಮದ್ದು ನೀಡಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ, ಮಿಷನ್ ಇಂದ್ರ ಧನುಷ್ ಯೋಜನೆಯನ್ನು ಆರಂಭಿಸಿತು. ಕರ್ನಾಟಕದ ಆರು ಜಿಲ್ಲೆಗಳಲ್ಲಿ ಮೊದಲು ಈ ಯೋಜನೆ ಆರಂಭವಾಯಿತು. ನಂತರ ಇತರ ಜಿಲ್ಲೆಗಳ ಮಕ್ಕಳನ್ನೂ ಗುರುತಿಸಿ ಚುಚ್ಚುಮದ್ದು ಕೊಡಲಾಗಿದೆ.
ಚುಚ್ಚುಮದ್ದು ವಂಚಿತರಾಗಿದ್ದ ಮಕ್ಕಳು
ವಂಚಿತರು (ಒಟ್ಟು), ಚುಚ್ಚುಮದ್ದು ಸಿಕ್ಕವರು
15,95,642; 12,96,959
ಇಲ್ಲಿಯವರೆಗೂ ಚುಚ್ಚುಮದ್ದು ಪಡೆಯದಿರುವವರು
2,98,683
ಗರ್ಭಿಣಿಯರಿಗೆ ಚುಚ್ಚುಮದ್ದು
ವಂಚಿತರು; ಚುಚ್ಚುಮದ್ದು ಸಿಕ್ಕವರು
29,5,091; 25,8,961
ಚುಚ್ಚುಮದ್ದು ಪಡೆಯದಿರುವವರು
36,130
ಶೇಖಡಾವಾರುಗಳಲ್ಲಿ
87.75%: ಚುಚ್ಚುಮದ್ದು ಪಡೆದುಕೊಂಡಿರುವ ಗರ್ಭಿಣಿಯರು
81.28%: ಚುಚ್ಚುಮದ್ದು ಸಿಕ್ಕಿರುವ ಮಕ್ಕಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.