ಹರಪನಹಳ್ಳಿ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ವಿವಾಹ ಹಮ್ಮಿಕೊಂಡು ಸಾವಿರಾರು ಜನರನ್ನು ಸೇರಿಸಿದ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮತ್ತು ಅವರ ಪುತ್ರ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಭರತ್ ವಿರುದ್ಧ ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರತ್ ಅವರನ್ನು ಮೊದಲ ಆರೋಪಿಯನ್ನಾಗಿ ಮತ್ತು ಪರಮೇಶ್ವರ ನಾಯ್ಕ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಿ ಅರಸಿಕೇರೆ ಹೋಬಳಿ ಕಂದಾಯ ನಿರೀಕ್ಷಕ ಕೆ.ಶ್ರೀಧರ್ ದೂರು ದಾಖಲಿ ಸಿದ್ದಾರೆ.
ಜೂನ್ 15ರಂದು ಲಕ್ಷ್ಮೀಪುರ ಗ್ರಾಮದಲ್ಲಿ ಪರಮೇಶ್ವರ ನಾಯ್ಕಅವರ ಹಿರಿಯ ಪುತ್ರ ಅವಿನಾಶ್ ಅವರ ವಿವಾಹವನ್ನು ನೆರವೇರಿಸಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮದುವೆ ಸಮಾರಂಭದ ವಿಡಿಯೊ, ಭಾವಚಿತ್ರ ಸಂಗ್ರಹಿಸಿದ್ದರು. ಕೋವಿಡ್ ನಿಯಮ ಉಲ್ಲಂಘಸಿದ್ದರಿಂದ ದೂರು ದಾಖಲಿಸಲು ಅನುಮತಿ ಕೋರಿ, ಹರಪನಹಳ್ಳಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಧೀಶರ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.