ADVERTISEMENT

ಮೊಬೈಲ್‌ ಆ್ಯಪ್‌ ಆಧಾರಿತ ಇಸಿಜಿ ಸಾಧನ

ಕುದಾಪುರದಲ್ಲಿನ ಬಿ.ಎ.ಆರ್.ಸಿ ಶಾಖೆಯ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:19 IST
Last Updated 16 ಆಗಸ್ಟ್ 2022, 21:19 IST
ಕುದಾಪುರದ ಬಾಬಾ ಅಣು ಸಂಶೋಧನಾ ಕೇಂದ್ರವು (ಬಿ.ಎ.ಆರ್.ಸಿ) ಸಿದ್ಧಪಡಿಸಿರುವ ಚಿಕ್ಕಗಾತ್ರದ ಇಸಿಜಿ ಉಪಕರಣ ಕುರಿತು ನಾಯಕನಹಟ್ಟಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಮಂಗಳವಾರ ಅಣು ಸಂಶೋಧನಾ ಕೇಂದ್ರದ ಸಿಬ್ಬಂದಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು (ಎಡಚಿತ್ರ) ಮೊಬೈಲ್‌ ಆ್ಯಪ್‌ ಆಧಾರಿತ ಇಸಿಜಿ ಉಪಕರಣ
ಕುದಾಪುರದ ಬಾಬಾ ಅಣು ಸಂಶೋಧನಾ ಕೇಂದ್ರವು (ಬಿ.ಎ.ಆರ್.ಸಿ) ಸಿದ್ಧಪಡಿಸಿರುವ ಚಿಕ್ಕಗಾತ್ರದ ಇಸಿಜಿ ಉಪಕರಣ ಕುರಿತು ನಾಯಕನಹಟ್ಟಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಮಂಗಳವಾರ ಅಣು ಸಂಶೋಧನಾ ಕೇಂದ್ರದ ಸಿಬ್ಬಂದಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು (ಎಡಚಿತ್ರ) ಮೊಬೈಲ್‌ ಆ್ಯಪ್‌ ಆಧಾರಿತ ಇಸಿಜಿ ಉಪಕರಣ   

ನಾಯಕನಹಟ್ಟಿ: ಇಲ್ಲಿನ ಕುದಾಪುರದಲ್ಲಿರುವ ಬಾಬಾ ಅಣು ಸಂಶೋಧನಾ ಕೇಂದ್ರದ (ಬಿ.ಎ.ಆರ್.ಸಿ) ಶಾಖೆಯು, ಹೃದ್ರೋಗಿಗಳಿಗೆ ಅನುಕೂಲಕರವಾದ ಮೊಬೈಲ್‌ ಆ್ಯಪ್‌ ಆಧಾರಿತ ಅಂಗೈ ಅಗಲದ ಇಸಿಜಿ ಉಪಕರಣವನ್ನು ಆವಿಷ್ಕರಿಸಿದೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಪ್ರಾತ್ಯಕ್ಷಿಕೆ ನೀಡಿದ ಬಳಿಕ ಸಂಸ್ಥೆಯ ಹಿರಿಯ ಯೋಜನಾ ವ್ಯವಸ್ಥಾಪಕ ಡಾ.ಧವಮಣಿ ಅವರು ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದರು.

‘ಇದು ಸುಲಭವಾಗಿ ಕಾರ್ಯನಿರ್ವಹಿಸುವ ಪುಟ್ಟ ಸಾಧನವಾಗಿದೆ. ಮೊಬೈಲ್ ಅಥವಾ ಕಂಪ್ಯೂಟರ್‌ ಮೂಲಕ ಇದನ್ನು ನೇರವಾಗಿ ಸಂಪರ್ಕಿಸಬಹುದು. ಇದಕ್ಕೆ ನೆಟ್‌ವರ್ಕ್‌, ಜಿಪಿಎಸ್, ಬ್ಲೂಟೂತ್ ಅಗತ್ಯವಿದೆ. ರೋಗಿಯ ದೇಹವನ್ನು ಸಂಪರ್ಕಿಸುವ ವೈರ್ ಕಾರ್ಡ್‌ಗಳನ್ನು ನೇರವಾಗಿ ಮೊಬೈಲ್‌ಗೆ ಸಂಪರ್ಕಿಸಲಾಗುತ್ತದೆ.ನಂತರ ಸಾಧನವು ರೋಗಿಯ ಹೃದಯ ಬಡಿತದ ಸ್ಪಷ್ಟ ಚಿತ್ರಣವನ್ನು ದಾಖಲಿಸುತ್ತದೆ. ವರದಿ ಹಾಗೂ ಇಸಿಜಿಯ ಭಾವಚಿತ್ರವನ್ನು ಸಾಮಾನ್ಯ ಯಂತ್ರದ ಮೂಲಕ ಮುದ್ರಿಸಿ ಪಡೆಯಬಹುದು. ಜೊತೆಗೆ ಪಿಡಿಎಫ್ ಮೂಲಕವೂ ರವಾನಿಸಬಹುದಾಗಿದೆ. ಇದರಿಂದ ಪರಿಣತ ವೈದ್ಯರಿಂದ ಚಿಕಿತ್ಸೆಯ ಬಗ್ಗೆ ಸಮಾಲೋಚನೆ ನಡೆಸಬಹುದಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಗ್ರಾಮೀಣ ಪ್ರದೇಶಗಳಲ್ಲಿ ಇಸಿಜಿ ಸಾಧನ ಮತ್ತು ತಂತ್ರಜ್ಞರ ಕೊರತೆ ಇದೆ. ಈ ಸಾಧನದಿಂದ ಸಾಮಾನ್ಯ ವೈದ್ಯರಲ್ಲದೆ, ಶುಷ್ರೂಷಕಿಯರೂ ಇದನ್ನು ಬಳಸಬಹುದು. ಪ್ರಸ್ತುತ ಈ ಇಸಿಜಿ ಉಪಕರಣವನ್ನು ನೇರಲಗುಂಟೆ, ನಾಯಕನಹಟ್ಟಿ, ದೊಡ್ಡಉಳ್ಳಾರ್ತಿ ಸೇರಿ ಹಲವು ಕೇಂದ್ರಗಳಿಗೆ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಕೇಂದ್ರದ ಆಡಳಿತ ವಿಭಾಗದ ನರೇಶ್ ಬಂಡೇಕರ್ ತಿಳಿಸಿದರು.

ಯೋಜನಾ ಉಪ ವ್ಯವಸ್ಥಾಪಕ ಎ.ಕೆ.ತಿವಾರಿ, ಲಕ್ಷ್ಮೀನಾರಾಯಣ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿಕಾಸ್, ಡಾ.ಮಧುರ, ಡಾ.ಸಣ್ಣಓಬಣ್ಣ, ಸಿಬ್ಬಂದಿ ಅಫ್ರೋಜ್, ಧನಲಕ್ಷ್ಮಿ ಇದ್ದರು.

*

ಗ್ರಾಮೀಣ ಪ್ರದೇಶಗಳಿಗೆ ಕಡಿಮೆ ಹಣ ಹಾಗೂ ಗುಣಮಟ್ಟದ ವೈದ್ಯಕೀಯ ಉಪಕರಣ ನೀಡಬೇಕು ಎಂಬ ಉದ್ದೇಶದಿಂದ ಈ ಉಪಕರಣವನ್ನು ಆವಿಷ್ಕರಿಸಲಾಗಿದೆ.
-ಡಾ.ಧವಮಣಿ, ಹಿರಿಯ ಯೋಜನಾ ವ್ಯವಸ್ಥಾಪಕ, ಬಿ.ಎ.ಆರ್.ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.