ADVERTISEMENT

ಭೋಪಾಲ ಕಾನೂನು ವಿಶ್ವವಿದ್ಯಾಲಯ ಪ್ರಥಮ

ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 15:47 IST
Last Updated 15 ಮಾರ್ಚ್ 2020, 15:47 IST
ಬೆಳಗಾವಿಯ ಕೆಎಲ್‌ಎಸ್‌ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಭಾನುವಾರ ಮುಕ್ತಾಯವಾದ ಎಂ.ಕೆ. ನಂಬಿಯಾರ್‌ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭೋಪಾಲದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಂಡಕ್ಕೆ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್‌. ಬನ್ನೂರಮಠ ಬಹುಮಾನ ವಿತರಿಸಿದರು
ಬೆಳಗಾವಿಯ ಕೆಎಲ್‌ಎಸ್‌ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಭಾನುವಾರ ಮುಕ್ತಾಯವಾದ ಎಂ.ಕೆ. ನಂಬಿಯಾರ್‌ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭೋಪಾಲದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಂಡಕ್ಕೆ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್‌. ಬನ್ನೂರಮಠ ಬಹುಮಾನ ವಿತರಿಸಿದರು   

ಬೆಳಗಾವಿ: ಭೋಪಾಲದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಂಡ ಇಲ್ಲಿನ ಕೆಎಲ್‌ಎಸ್‌ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಎಂ.ಕೆ. ನಂಬಿಯಾರ್‌ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು.

ಚೆನ್ನೈನ ಡಾ.ಅಂಬೇಡ್ಕರ್‌ ಕಾನೂನು ವಿಶ್ವವಿದ್ಯಾಲಯ ತಂಡಕ್ಕೆ 2ನೇ ಬಹುಮಾನ ಗಳಿಸಿತು. ತಮಿಳುನಾಡಿನ ಶಾಸ್ತ್ರ ವಿಶ್ವವಿದ್ಯಾಲಯದ ಪಿ.ಪ್ರಜೀತ ಹಾಗೂ ಡಾ.ಅಂಬೇಡ್ಕರ್‌ ವಿಶ್ವವಿದ್ಯಾಲಯದ ದಿವ್ಯಾ ಮಲೈಸ್ವಾಮಿ ‘ಅತ್ಯುತ್ತಮ ಸ್ಪೀಕರ್ಸ್‌’ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಅತಿಥಿಗಳು ಪಾರಿತೋಷಕ ವಿತರಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್. ಬನ್ನೂರಮಠ, ‘ಕಾನೂನು ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವ ವಿಕಸನದ ಕಡೆಗೂ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

‘ವಕೀಲರು ನ್ಯಾಯದಾನ ಪ್ರಕ್ರಿಯೆಯ ಪ್ರಮುಖ ಅಂಗ. ವೃತ್ತಿ ಧರ್ಮ ಮತ್ತು ಸಾಮಾಜಿಕ ಮೌಲ್ಯಗಳು ಯುವ ವಕೀಲರನ್ನು ಪ್ರೇರೇಪಿಸಬೇಕು. ನ್ಯಾಯಾಲಯಗಳಲ್ಲಿ ವಾದಿಸುವುದು ವಕೀಲರಿಗೆ ಕೇವಲ ಹಣ ಅಥವಾ ಯಶಸ್ಸು ಗಳಿಸುವ ಮಾರ್ಗವಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು’ ಎಂದರು.

‘ಯುವಜನರು ಸಾಮಾಜಿಕ ಮಾಧ್ಯಮಗಳನ್ನು ಸಕಾರಣವಾಗಿ, ಅಗತ್ಯವಿದ್ದಷ್ಟೇ ಬಳಸಬೇಕು. ಅದರ ಅತಿಯಾದ ಬಳಕೆಯಿಂದ ಮನುಷ್ಯರ ನಡುವೆ ಅಂತರ ಜಾಸ್ತಿಯಾಗುತ್ತಿದೆ. ಓದುವ, ಬರೆಯುವ ಕಲೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ’ ಎಂದು ಕಳವಳ ವ್ಯಕ್ತ‍ಪಡಿಸಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎ. ಪಾಟೀಲ, ‘ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅಂತಃಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಬೇಕು’ ಎಂದರು.

‘ಕಾನೂನು ವ್ಯವಹಾರ ಜ್ಞಾನದ ಮೇಲೆ ಆಧಾರವಾಗಿದೆ. ಅದನ್ನು ನಾವು ಕ್ಲಿಷ್ಟವಾಗಿಸಬಾರದು. ಅತ್ಯಂತ ಸರಳವಾಗಿ ಅರ್ಥೈಸಬೇಕು’ ಎಂದುನಿವೃತ್ತ ನ್ಯಾ. ಎ.ಎಸ್‌. ಪಾಶ್ಚಾಪುರೆ ತಿಳಿಸಿದರು.

ಕರ್ನಾಟಕ ಕಾನೂನು ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ಸಾಹುಕಾರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ವಿ. ಗಣಾಚಾರಿ, ಪ್ರಾಂಶುಪಾಲ ಡಾ.ಅನಿಲ ಹವಾಲ್ದಾರ, ಶಿಕ್ಷಕ ಸಂಚಾಲಕ ಸತೀಶ ಅನಿಖಿಂಡಿ, ಅಣಕು ನ್ಯಾಯಾಲಯ ಸಮಿತಿ ಕಾರ್ಯದರ್ಶಿ ಮೇಘಾ ಸೋಮಣ್ಣನವರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ರೋಹಿತ ನಾಗೇಶ ಲಾತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.