ಬೆಂಗಳೂರು: ‘ಸಮರ್ಥ ನಾಯಕತ್ವ,ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ಮತ್ತುದೂರದೃಷ್ಟಿವುಳ್ಳ ಜನನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಲ್ಲೇ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದರು.
ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆಯೇ ಭಾರತಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಮೋದಿ ಅವರು ವರವಾಗಿ ಪರಿಣಮಿಸಿದರು. ಶೇ 46 ರಷ್ಟು ಯುವಜನತೆಯನ್ನು ದೇಶದ ಶಕ್ತಿ ಎಂದು ಪರಿಗಣಿಸಿ ಅಭಿವೃದ್ಧಿಯಲ್ಲಿ
ತೊಡಗಿಸಿಕೊಂಡರು’ ಎಂದು ವಿವರಿಸಿದರು.
‘ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿ ಅವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಮೋದಿ ಅವರ ಕುರಿತಾದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದಾದ್ಯಂತ ವಿತರಿಸಲಾಗುವುದು’ ಎಂದರು. ನಾಯಕತ್ವ ಪ್ರಮುಖವಾಗುತ್ತದೆ ಎನ್ನುವುದು ಜನರಿಗೆಗೊತ್ತಾಗಿದೆ ಎಂದು ಕೇಂದ್ರ ಸಚಿವ ಲೋಗನಾಥನ್ ಮುರುಗನ್ ತಿಳಿಸಿದರು.
ಭಾರತ ಬದಲಾಗಿದೆ: ಸುಧಾಮೂರ್ತಿ
‘ಭಾರತ ದೇಶ ಹೇಗೆ ಬದಲಾಗಿದೆ ಎನ್ನುವ ಕುರಿತು ಈ ಕೃತಿಯಲ್ಲಿ ನಾನು ಒಂದು ಅಧ್ಯಾಯ ಬರೆದಿರುವೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದಸುಧಾ ಮೂರ್ತಿ ತಿಳಿಸಿದರು.
‘ಮೋದಿ ಅವರ ಜತೆ ನಾನು ಕೆಲಸ ಮಾಡಿಲ್ಲ. ಅವರ ನಿಕಟ ಸಂಪರ್ಕದಲ್ಲಿಯೂ ಇಲ್ಲ. ಆದರೆ, 20 ವರ್ಷಗಳಲ್ಲಿ ಮಹಿಳೆ ಹೇಗೆ ಬದಲಾಗಿದ್ದಾಳೆ. ಇದಕ್ಕೆ ಕಾರಣಗಳೇನು ಎನ್ನುವುದನ್ನು ವಿಶ್ಲೇಷಿಸುವ ಲೇಖನ ಇದಾಗಿದೆ.ಗ್ರಾಮೀಣ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ನೋಡಿ ಲೇಖನ ಬರೆದಿದ್ದೇನೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.