ಬೆಂಗಳೂರು:‘ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ, 45 ವರ್ಷಗಳಲ್ಲಿ ಅತ್ಯಧಿಕ ನಿರುದ್ಯೋಗಕ್ಕೆ ಕಾರಣಕರ್ತರಾಗಿದ್ದಾರೆ. ಇದರ ವಿರುದ್ಧ ಸಿಡಿದೆದ್ದಿರುವ ದೇಶದ ಯುವಜನರು ಆರಂಭಿಸಿರುವ ಅಭಿಯಾನವನ್ನು ನಾನು ಬೆಂಬಲಿಸುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ನರೇಂದ್ರ ಮೋದಿ ಆಡಳಿತದ ನಿರುದ್ಯೋಗ ಪರ್ವ ನಿರಾಂತಕವಾಗಿ ಮುಂದುವರಿದಿದೆ. ಸಂಬಳ ಪಡೆಯುವ ಎರಡು ಕೋಟಿ ಉದ್ಯೋಗಗಳು ಮತ್ತು ಒಟ್ಟು 12 ಕೋಟಿ ಉದ್ಯೋಗಗಳುಆರು ತಿಂಗಳಲ್ಲಿ ನಷ್ಟವಾಗಿವೆ. ಉದ್ಯೋಗ ಸೃಷ್ಟಿಗೆ ನಿಮ್ಮ ಯೋಜನೆ ಏನು. ದೇಶದ ಯುವಜನರು ಕೇಳುತ್ತಿದ್ದಾರೆ ಉತ್ತರಿಸಿ’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
‘ಎಡಬಿಡಂಗಿ ಆಡಳಿತ ನೀತಿಯ ಮೂಲಕ ಕಳೆದ 6 ತಿಂಗಳಲ್ಲಿ 2.1 ಕೋಟಿ ಯುವಕರ ಉದ್ಯೋಗ ಕಸಿದು
ಅವರನ್ನು ಬೀದಿಗೆ ಬರುವಂತೆ ಮಾಡಿದ ಮೋದಿಯವರ ಜನ್ಮದಿನದ ಅರ್ಥಾತ್ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯ’ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು: ಸಿದ್ದರಾಮಯ್ಯ ಟೀಕೆ
ಬೆಂಗಳೂರು: ‘ರಾಜ್ಯದಲ್ಲಿ ಯಡಿಯೂರಪ್ಪ ಜೊತೆಗೆ ಪುತ್ರ ವಿಜಯೇಂದ್ರ ಕೂಡಾ ಪರ್ಯಾಯ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಜೊತೆ ಸಭೆ ನಡೆಸಲು ಬಿಜೆಪಿಯಲ್ಲಿ ಬೇರೆ ಪದಾಧಿಕಾರಿಗಳು ಇರಲಿಲ್ಲವೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘₹ 53 ಸಾವಿರ ಕೋಟಿ ಸಾಲ ಪಡೆಯುವುದಾಗಿ ಬಜೆಟ್ನಲ್ಲಿ ಸರ್ಕಾರ ಹೇಳಿದೆ. ಜತೆಗೆ ₹ 33 ಸಾವಿರ ಕೋಟಿ ಸಾಲ ಪಡೆಯಲು ಈಗ ನಿರ್ಧರಿಸಿದೆ. ಹೀಗಾದರೆ, ರಾಜ್ಯ ಉಳಿಯುವುದೇ. ಕೊನೆಗೆ ಬಡ್ಡಿ, ಸಾಲ ತೀರಿಸಲು ಮಾತ್ರ ಹಣ ಇರುತ್ತದೆಯೇ ಹೊರತು ಅಭಿವೃದ್ಧಿ ಶೂನ್ಯವಾಗುತ್ತದೆ’ ಎಂದರು.
‘ನೀವು ಜನರ ಬಳಿಗೆ ಹೋಗಿ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಯಡಿಯೂರಪ್ಪ ನಮಗೆ ಹೇಳುತ್ತಿದ್ದರು. ಆದರೆ, ನಮಗೆ ಯಾರೂ ಹೊಡೆಯಲಿಲ್ಲ. ಈಗ ಆಡಳಿತ ನಡೆಸುತ್ತಿರುವವರು ಜನರ ಬಳಿಗೆ ಹೋದರೆ ಬಡಿಗೆ ಏಟು ಬೀಳುವುದು ಖಚಿತ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.