ADVERTISEMENT

ಬಿಎಸ್‌ಎಫ್‌ ತೆಕ್ಕೆಗೆ ಮುಧೋಳ ತಳಿ ನಾಯಿ

ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರ: ಅಕ್ಟೋಬರ್ 16ರಂದು ಹಸ್ತಾಂತರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:36 IST
Last Updated 12 ಅಕ್ಟೋಬರ್ 2020, 14:36 IST
ಮುಧೋಳ ತಳಿ ನಾಯಿ
ಮುಧೋಳ ತಳಿ ನಾಯಿ   

ಬಾಗಲಕೋಟೆ: ಈಗಾಗಲೇ ಭಾರತೀಯ ಸೇನೆ, ಸಶಸ್ತ್ರ ಸೀಮಾಬಲ (ಎಸ್‌ಎಸ್‌ಬಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್‌ (ಐಟಿಬಿಪಿ) ಪಡೆಗಳಲ್ಲಿ ತಮ್ಮ ಛಾಪು ಮೂಡಿಸಿರುವ ಮುಧೋಳ ತಳಿ ಶ್ವಾನಗಳು ಹೊಸದಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸೇವೆಗೆ ಸೇರ್ಪಡೆಯಾಗುತ್ತಿವೆ.

ಗಡಿಯಲ್ಲಿ ಪಹರೆಗೆ ಮುಧೋಳ ತಳಿ ನಾಯಿಗಳ ಬಳಕೆಗೆಬಿಎಸ್‌ಎಫ್ ಮುಂದಾಗಿದ್ದು,‌ ನಾಲ್ಕು ನಾಯಿ ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡಅಕ್ಟೋಬರ್ 16ರಂದು ಮುಧೋಳ ತಾಲ್ಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರಕ್ಕೆ ನಾಯಿಗಳ ಕೊಂಡೊಯ್ಯಲು ಬರಲಿದೆ.

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ತಿಮ್ಮಾಪುರ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಅಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಬಿಎಸ್‌ಎಫ್‌ ತಂಡಕ್ಕೆ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಶಿವಪ್ರಸಾದ್ ತಲಾ ಎರಡು ಹೆಣ್ಣು ಹಾಗೂ ಗಂಡು ನಾಯಿಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಆಕಾಶಿ ’ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಬಿಎಸ್‌ಎಫ್ ಕೊಂಡೊಯ್ಯುವ ನಾಯಿಗಳಿಗೆ‌ ಉತ್ತರಪ್ರದೇಶದ ಮೀರತ್‌ನಲ್ಲಿರುವ ಭಾರತೀಯ ಸೇನೆಯ ರಿಮೌಂಟ್‌ ಆಂಡ್ ವೆಟರ್ನರಿ ಕಾರ್ಪ್‌ ಸೆಂಟರ್‌ನಲ್ಲಿ (ಆರ್‌ವಿಸಿ) 10 ತಿಂಗಳ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಪೊಲೀಸ್ ಇಲಾಖೆಯಿಂದಲೂ ಮುಧೋಳ ಶ್ವಾನಕ್ಕೆ ಬೇಡಿಕೆ ಬಂದಿದ್ದು, ಮೌಖಿಕವಾಗಿ ಕೇಳಿದ್ದಾರೆ. ಲಿಖಿತವಾಗಿ ಪತ್ರ ಬಂದ ನಂತರ ಅವರಿಗೂ ನಾಯಿಗಳ ಕೊಡಲಾಗುವುದು ಎಂದು ಡಾ.ಆಕಾಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.