ಪಡುಬಿದ್ರಿ: ಮೊಬೈಲ್ನಲ್ಲಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಮೇಲೆ ಮಹಿಳೆ ಬುಧವಾರ ಇಲ್ಲಿ ಹಲ್ಲೆ ನಡೆಸಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಮೂಲ್ಕಿಯ ರಿಕ್ಷಾ ಚಾಲಕ ದಿನೇಶ್ ಸನಿಲ್ ಮಾನಂಪಾಡಿ (45) ಮೃತರು. ಪಡುಬಿದ್ರಿಯ ದೀನ್ಸ್ಟ್ರೀಟ್ ನಿವಾಸಿ ಇಬ್ರಾಹಿಂ ಎಂಬವವರ ಪುತ್ರಿ ಝೀನತ್ ಹಲ್ಲೆ ನಡೆಸಿದ ಮಹಿಳೆ.
ದಿನೇಶ್ ಝೀನತ್ ಮೊಬೈಲ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ, ವ್ಯಕ್ತಿಯನ್ನು ಪಡುಬಿದ್ರಿ ಬಸ್ ನಿಲ್ದಾಣಕ್ಕೆ ಬರಲು ಹೇಳಿದ್ದರು. ತಂದೆ ಇಬ್ರಾಹಿಂ ಜತೆಗೆ ಬಂದಿದ್ದ ಝೀನತ್ ಸಾರ್ವಜನಿಕವಾಗಿ ದಿನೇಶ್ ಕೆನ್ನೆಗೆ ಬಾರಿಸಿದ್ದರು. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರಿಕ್ಷಾದಲ್ಲಿ ಕರೆದುಕೊಂಡ ಹೋಗಲಾಯಿತು. ಆದರೆ, ಈ ವೇಳೆ ದಿನೇಶ್ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಸಂಶಯವಿರುವುದಾಗಿ ದಿನೇಶ್ ಸಹೋದರ ದೂರು ನೀಡಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿನ ಸುದ್ದಿ ತಿಳಿದು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು, ಇದೊಂದು ವ್ಯವಸ್ಥಿತ ಕೊಲೆಯಾಗಿದೆ. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೆಲಕಾಲ ಠಾಣೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಝೀನತ್ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.