ಧಾರವಾಡ: ನಿವೃತ್ತ ಐಆರ್ಎಸ್ ಅಧಿಕಾರಿ ಹಾಗೂ ಹಿರಿಯ ಸಾಹಿತಿ ಎನ್.ಪಿ.ಭಟ್ (88) ಭಾನುವಾರ ಇಲ್ಲಿನ ನಾರಾಯಣಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು.
ಅವರಿಗೆ ಪತ್ನಿ ಡಾ. ಯಶೋಧಾ ಭಟ್ (ಡಾ. ವಿ.ಕೃ.ಗೋಕಾಕ ಅವರ ಪುತ್ರಿ) ಹಾಗೂ ಸೊಸೆ ಸುಮಂಗಲಾ ಭಟ್ ಇದ್ದಾರೆ. ನಗರದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.
ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಜನಿಸಿದ ಅವರು ಉತ್ತಮ ಅರ್ಥಶಾಸ್ತ್ರಜ್ಞರಾಗಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1955ರಲ್ಲಿ ಐಆರ್ಎಸ್ ಅಧಿಕಾರಿಯಾದರು. ಆದಾಯ ತೆರಿಗೆ ಆಯುಕ್ತರಾಗಿ ನಿವೃತ್ತರಾದ ಇವರು 1999ರಿಂದ ಧಾರವಾಡದಲ್ಲಿ ನೆಲೆಸಿದರು.
ತಮ್ಮ ಕೊನೆಯ ಉಸಿರಿನವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದ ಎನ್.ಪಿ.ಭಟ್ ಅವರು, ಅವನಿ ರಸಿಕರ ರಂಗ ಎಂಬ ಸಂಸ್ಥೆ ಸ್ಥಾಪಿಸಿ ದಶಕಕ್ಕೂ ಹೆಚ್ಚು ಕಾಲ ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಂಗೀತ ಕಲೆ ಶ್ರೀಮಂತಗೊಳಿಸಲು ಶ್ರಮಿಸಿದರು. ರಂಜನ ಭಟ್ಟ, ನಾರಂಗಿ ಭಟ್ಟ ಎಂಬ ಕಾವ್ಯನಾಮದಿಂದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ. ದಕ್ಷಿಣ ಧೃವ ನಕ್ಕಾಗ ಎಂಬ ಕಥಾಸಂಕಲನ, ಅಲ್ಲಿಯ ಇಲ್ಲಿಯ ಕಥೆಗಳು, ಹೆಮ್ಮರಗಳು ತಲೆಎತ್ತಿವೆ, ಕುಬೇರ ರಾಜ್ಯದ ಚಿತ್ರ ವಿಚಿತ್ರ ಎಂಬ ಅಮೆರಿಕ ಪ್ರವಾಸ ಕಥನ ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.
ಗ್ರಾಹಕರ ವೇದಿಕೆಯ ಅಧ್ಯಕ್ಷರಾಗಿದ್ದ ಅವರು ಗ್ರಾಹಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದರು. ದೆಹಲ್ಲಿದ್ದ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ದೆಹಲಿಯ ಇಂಟ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಶಾಖೆಯೊಂದನ್ನುಧಾರವಾಡದಲ್ಲಿ ಆರಂಭಿಸಿ ಅಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ಅದರ ಉಸ್ತುವಾರಿ ವಹಿಸಿದ್ದರು. ಇವುಗಳೊಂದಿಗೆ ಮಾಳಮಡ್ಡಿಯಲ್ಲಿ 2 ವಾಚನಾಲಗಳ ಸ್ಥಾಪನೆ, ವಿ.ಕೃ.ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಸಂಸ್ಥಾಪಕ ಸದಸ್ಯರೂ ಆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.