ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕಾರ

ನಳಿನ್ ನೇತೃತ್ವದಲ್ಲಿ 150 ಸ್ಥಾನ ಗೆಲ್ಲಬೇಕು: ಬಿಎಸ್‌ವೈ ಹಾರೈಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 6:11 IST
Last Updated 27 ಆಗಸ್ಟ್ 2019, 6:11 IST
ಅಧಿಕಾರ ಹಸ್ತಾಂತರದ ಬಳಿಕ ನಳಿನ್ ಅವರನ್ನು ಯಡಿಯೂರಪ್ಪ ಅಭಿನಂದಿಸಿದರು
ಅಧಿಕಾರ ಹಸ್ತಾಂತರದ ಬಳಿಕ ನಳಿನ್ ಅವರನ್ನು ಯಡಿಯೂರಪ್ಪ ಅಭಿನಂದಿಸಿದರು   

ಬೆಂಗಳೂರು: ಬಿಜೆಪಿರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್ ಕಟೀಲ್‌ಅಧಿಕಾರ ಸ್ವೀಕರಿಸಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಬಾವುಟ ನೀಡುವ ಮೂಲಕ ನಳಿನ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯ ನಳಿನ್‌, 2009ರಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಂಸದರಾಗಿ ಆಯ್ಕೆಯಾದರು. 2014 ಹಾಗೂ 2019ರಲ್ಲಿಯೂ ಸಂಸದರಾಗಿ ಪುನರಾಯ್ಕೆ ಆದರು. ಕಟ್ಟಾ ಆರ್‌ಎಸ್‌ಎಸ್‌ ಸಿದ್ಧಾಂತದ ಪ್ರತಿಪಾದಕ ನಳಿನ್‌ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮೂರು ವರ್ಷದ ಹಿಂದೆಯೂ ಒಮ್ಮೆ ಮುಂಚೂಣಿಗೆ ಬಂದಿತ್ತು.

ADVERTISEMENT

‘ನಳಿನ್ ನೇತೃತ್ವದಲ್ಲಿ 150 ಸ್ಥಾನ ಗೆಲ್ಲಬೇಕು’

ಅಧಿಕಾರ ಹಸ್ತಾಂತರದ ಬಳಿಕ ನಳಿನ್ ಅವರನ್ನು ಅಭಿನಂದಿಸಿ ಮಾತನಾಡಿದ ಯಡಿಯೂರಪ್ಪ, ‘ನಳಿನ್ ನೇತೃತ್ವದಲ್ಲಿ ಪಕ್ಷವು ರಾಜ್ಯದಲ್ಲಿ 150 ಸ್ಥಾನ ಗೆಲ್ಲಬೇಕು. ಅಲ್ಲಿವರೆಗೆ ಯಾರೊಬ್ಬರೂ ವಿಶ್ರಮಿಸಬಾರದು’ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಆದ್ಯತೆ. ಮುಖ್ಯಮಂತ್ರಿಯಾದ ದಿನದಿಂದ ಒಂದು ನಿಮಿಷ ವಿಶ್ರಾಂತಿ ಪಡೆಯದೆ‌ ಅಹರ್ನಿಶಿ ದುಡಿಯುತ್ತಿದ್ದೇನೆ. ಈಗ ಉತ್ತಮ ಸಂಪುಟ ಇದೆ. ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ದುಡಿಯುವ ಜತೆಗೆ ಮತ್ತೊಮ್ಮೆ ಬಿಜೆಪಿಯನ್ನು ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತರುವತ್ತ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕಿದೆ ಎಂದು ಯಡಿಯೂರಪ್ಪ ಹೇಳಿದರು.

‘ರಾಜ್ಯದ ಪ್ರವಾಹ ಪರಿಹಾರಕ್ಕಾಗಿ ನಮ್ಮ ನಿರೀಕ್ಷೆ ಮೀರಿ ಹೆಚ್ಚಿನ ನೆರವನ್ನು ಕೇಂದ್ರ ಸರ್ಕಾರ ‌ನೀಡಲಿದೆ. ಪ್ರವಾಹ ಸಂತ್ರಸ್ತರಿಗೆ ಕೈಗಾರಿಕೋದ್ಯಮಿಗಳು, ಸರ್ಕಾರಿ ನೌಕರರು, ಮಠಾಧೀಶರು ಉದಾರ ನೆರವು ನೀಡಿದ್ದಾರೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.