ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಅರ್ಥಶಾಸ್ತ್ರ ಪಠ್ಯ ಗೊಂದಲ; ಮರು ಪರಿಶೀಲನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 9:52 IST
Last Updated 13 ಸೆಪ್ಟೆಂಬರ್ 2021, 9:52 IST
ಎಸ್.ಎಸ್.ಪಾಟೀಲ್
ಎಸ್.ಎಸ್.ಪಾಟೀಲ್   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಪಠ್ಯ ಕ್ರಮದಲ್ಲಿ ಪದವಿ ತರಗತಿಗಳ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯ ಕೈ ಬಿಟ್ಟಿರುವ ನಿರ್ಧಾರವನ್ನು ಸರ್ಕಾರ ಮತ್ತು ಉನ್ನತ ಶಿಕ್ಷಣ ಪರಿಷತ್ ಮರು ಪರಿಶೀಲಿಸಬೇಕು ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್.ಪಾಟೀಲ್ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಪಠ್ಯದಲ್ಲಿ ಅರ್ಥಶಾಸ್ತ್ರ ವಿಷಯ ಕೈ ಬಿಟ್ಟಿರುವುದು ದೊಡ್ಡ ಅಪರಾಧವಾಗಿದೆ. ಅರ್ಥಶಾಸ್ತ್ರವನ್ನು ಪ್ರತ್ಯೇಕವಾಗಿ ಕಲಿಯದೇ ವಾಣಿಜ್ಯ ಶಾಸ್ತ್ರ ಪೂರ್ಣಗೊಳ್ಳುವುದಿಲ್ಲ. ಅರ್ಥಶಾಸ್ತ್ರವನ್ನು ಅರ್ಥಶಾಸ್ತ್ರ ಪ್ರಾಧ್ಯಾಪಕರೇ ಬೋಧನೆ ಮಾಡುವುದರಿಂದ ವಿಷಯಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಲೀನಗೊಳಿಸಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಿಂದ ಬೋಧನೆ ಮಾಡಿಸುವ ನಿರ್ಧಾರ ಗೊಂದಲಕ್ಕೆ ಎಡೆ ಮಾಡಿಕೊಡುತ್ತದೆ ಎಂದರು.

ಕೆಲವರ ಹಿತಾಸಕ್ತಿ, ಪ್ರತಿಷ್ಠೆಯಿಂದ ಹೊಸ ಪಠ್ಯಕ್ರಮದಲ್ಲಿ ಈ ತರಹದ ಗೊಂದಲದ ಮಾರ್ಪಾಡುಗಳು ಆಗಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಪೆಟ್ಟು ಬೀಳಲಿದೆ. ಪರಿಣಿತರು ಆಮೂಲಾಗ್ರ ಚರ್ಚೆ ನಡೆಸದೇ ಆತುರದ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ. ಇದರಿಂದ ಮುಂದಿನ ಪೀಳಿಗೆಗೆ ಅನ್ಯಾಯ ಆಗಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಪರಿಷತ್ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸೆ. 20 ರಂದು ಅರ್ಥಶಾಸ್ತ್ರ ಪ್ರಾಧ್ಯಾಪಕರ ಒಕ್ಕೂಟದಿಂದ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅರ್ಥಶಾಸ್ತ್ರ ಪಠ್ಯ ಗೊಂದಲ ಸರಿಪಡಿಸುವಂತೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದೆ ಹೋರಾಟ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.