ಬೆಂಗಳೂರು: ‘ತಂತ್ರಜ್ಞಾನದ ಬಳಕೆಯಿಂದ ವಿಶೇಷ ವಿನ್ಯಾಸಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ರೇಷ್ಮೆ ಕೈಮಗ್ಗ ನೇಕಾರರು ಹಾಗೂ ಇಬ್ಬರು ಹತ್ತಿ, ಉಣ್ಣೆ ನೇಕಾರರಿಗೆ ಮುಂದಿನ ವರ್ಷದಿಂದ ರಾಜ್ಯ ಪ್ರಶಸ್ತಿ ನೀಡಲಾಗುವುದು’ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ವಿಕಾಸಸೌಧದಲ್ಲಿ ನಡೆದ ‘ರಾಷ್ಟ್ರೀಯ ಕೈಮಗ್ಗ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದ ಕೈಮಗ್ಗ ಕ್ಷೇತ್ರವು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸುತ್ತಿದೆ. ಇವುಗಳಿಗೆ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಇದೆ. 54 ಸಾವಿರ ಕೈಮಗ್ಗ ನೇಕಾರರು ಈ ಉದ್ದಿಮೆಯನ್ನು ಅವಲಂಬಿಸಿದ್ದಾರೆ’ ಎಂದರು.
‘ಬೆಳಗಾವಿ, ತುಮಕೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಚಿತ್ರದುರ್ಗ, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಕೈಮಗ್ಗ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಳಕಲ್ ಸೀರೆ, ಗುಳ್ಳೇದ ಗುಡ್ಡದ ಖಣ, ಉಡುಪಿ ಹತ್ತಿ ಸೀರೆ, ಮೊಳಕಾಲ್ಮುರು ರೇಷ್ಮೆ, ಚಿಂತಾಮಣಿ ರೇಷ್ಮೆ ಸೀರೆ, ಕೊಳ್ಳೇಗಾಲದ ರೇಷ್ಮೆ ಸೀರೆ ಹಾಗೂ ಕಾಟನ್ ಬೆಡ್ಶೀಟ್, ಟವಲ್, ಲುಂಗಿ ಇತ್ಯಾದಿ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿದೆ’ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಏಳು ಕೈಮಗ್ಗ ನೇಕಾರರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.