ADVERTISEMENT

‘ನವ ಕರ್ನಾಟಕ ಶೃಂಗ’ ಇಂದು: ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ–ಸಂವಾದ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:31 IST
Last Updated 9 ಮಾರ್ಚ್ 2023, 19:31 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ಆವಿಷ್ಕಾರ, ಪ್ರಗತಿ ಹಾಗೂ ಪರಿವರ್ತನೆಯ ಆಶಯದ ‘ನವ ಕರ್ನಾಟಕ’ ಶೃಂಗ ಕಾರ್ಯಕ್ರಮ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ‘ನವ ಭಾರತಕ್ಕಾಗಿ, ನವ ಕರ್ನಾಟಕ’ ಉದ್ದೇಶದ ಈ ಶೃಂಗವು, ಉತ್ತರ ಕರ್ನಾಟಕದ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲಲಿದೆ.

ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ‘ಪಿವಿ ಮತ್ತು ಡಿಎಚ್‌ ಬ್ರಾಂಡ್‌ ಸ್ಪಾಟ್’ನಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೋಟೆಲ್‌ನ ಮಥುರಾ ಸಭಾಂಗಣ ದಲ್ಲಿ ನಡೆಯಲಿರುವ ಶೃಂಗದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಕರ್ನಾಟಕದ ಕುರಿತು ಮೂರು ಪ್ರಮುಖ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ನವ ಭಾರತ ನಿರ್ಮಾಣದಲ್ಲಿ ನವ ಕರ್ನಾಟಕವು ರಾರಾಜಿಸಬೇಕು. ನವ ಕರ್ನಾಟಕ ಮಾದರಿಯಾಗಬೇಕು ಎಂಬ ಆಶಯದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ADVERTISEMENT

ಸಂಜೆ 5.15ಕ್ಕೆ ‘ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಕಾರ್ಯಸೂಚಿ’ ಕುರಿತ ಗೋಷ್ಠಿಯಲ್ಲಿ ಹಾವೇರಿ–ಗದಗ ಸಂಸದರಾದ ಶಿವಕುಮಾರ ಉದಾಸಿ ಉಪಸ್ಥಿತರಿರುತ್ತಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಯೋಜನೆಗಳ ದೂರಗಾಮಿ ಪರಿಣಾಮದ ಕುರಿತು ಲೆಕ್ಕಪರಿಶೋಧಕರಾದ ಶೇಷಗಿರಿ ಕುಲಕರ್ಣಿ ವಿಷಯ ಪ್ರತಿಪಾದಿಸಲಿದ್ದಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ ಹಾಗೂ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ತುಳಸಿಮಾಲಾ ಸಮಗ್ರ ಅಭಿವೃದ್ಧಿಯ ಕುರಿತು ಹೆಚ್ಚಿನ ಬೆಳಕು ಚೆಲ್ಲಲಿದ್ದಾರೆ.

‘ರೈತರು ಮತ್ತು ನೀರಾವರಿ ಅಭಿವೃದ್ಧಿ’ ವಿಷಯ ಕುರಿತ ಗೋಷ್ಠಿ ಸಂಜೆ 6.10ಕ್ಕೆ ಆರಂಭವಾಗಲಿದೆ. ಕೃಷಿ ಸಚಿವರಾದ ಬಿ.ಸಿ. ಪಾಟೀಲ, ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೊದ್ದಾರ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹಾಗೂ ಸಾವಯವ ಕೃಷಿಕ ಮತ್ತು ಬರಹಗಾರ ಆನಂದ ಕಡಕೋಳ ಬೆಳಕು ಚೆಲ್ಲಲಿದ್ದಾರೆ.

ಸಂಜೆ 7ಕ್ಕೆ ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಸಮಾಜ ಕಲ್ಯಾಣ ಕಾರ್ಯಕ್ರಮಗಳು’ ಕುರಿತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸುಭಾಷ ನಾಟೇಕರ, ಗದುಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌. ಚಟಪಲ್ಲಿ ಹಾಗೂ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಂ.ಎಸ್. ಸುಭಾಷ್ ವಿಷಯ ಮಂಡಿಸಲಿದ್ದಾರೆ.

ರಾತ್ರಿ 7.45ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಯ ಆಶಯಗಳ ಕುರಿತು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.