ನವಲಗುಂದ: ನೆರೆಯ ಪರಿಣಾಮ ಬೆಳೆ ನಷ್ಟ ಅನುಭವಿಸಿದ್ದ ತಾಲ್ಲೂಕಿನ ರೈತರು, ಕೆಲವೇ ದಿನಗಳ ಹಿಂದೆ ಖಾತೆಗೆ ಜಮಾ ಆಗಿದ್ದ ಬೆಳೆ ವಿಮೆ ಹಣವನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಜೂಜಾಡಿ ಕಳೆದುಕೊಂಡು ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ.
ಧಾರವಾಡ ಜಿಲ್ಲೆಗೆ 2018ರ ಹಿಂಗಾರು ಬೆಳೆ ವಿಮೆ ₹ 149 ಕೋಟಿ ಬಿಡುಗಡೆಯಾಗಿತ್ತು. ನವಲಗುಂದ ತಾಲ್ಲೂಕಿನ 35,619 ರೈತರ ಪಾಲಿನ ಮೊತ್ತ ₹ 68 ಕೋಟಿಯನ್ನು ಬಿಡುಗಡೆಯಾಗಿತ್ತು. ದೀಪಾವಳಿ ಹಬ್ಬಕ್ಕೂ ಎರಡು ದಿನ ಮೊದಲೇ ಕನಿಷ್ಠ ₹20 ಸಾವಿರದಿಂದ ಗರಿಷ್ಠ ₹3.5 ಲಕ್ಷ ಹಣವನ್ನು ತಾಲ್ಲೂಕಿನ ರೈತರ ಖಾತೆಗೆ ಜಮಾ ಮಾಡಲಾಗಿತ್ತು.
ಸಂಕಷ್ಟದಲ್ಲಿದ್ದ ರೈತರು ಇದೇ ಹಣದಿಂದ ಹಬ್ಬವನ್ನು ಆಚರಿಸಿದ್ದರು. ಲಕ್ಷ್ಮಿಪೂಜೆಯ ರಾತ್ರಿ ಜೂಜಾಡಿದರೆ ವಹಿವಾಟು ಹೆಚ್ಚುವುದು ಎಂಬ ಮೂಢನಂಬಿಕೆ ಇರುವುದರಿಂದ ಕೆಲವು ರೈತರು ಜೂಜಿನ ಮೋಜಿಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ.
’ನಾವು ತಪ್ಪು ಮಾಡಿದೆವು. ಬೆಳೆವಿಮೆ ಹಣವನ್ನು ಜೂಜಾಡಿ ಕೈಸುಟ್ಟುಕೊಂಡಿದ್ದೇವೆ. ಮನೆಯಲ್ಲಿ ಹೇಳಿದರೆ ಹೆಂಡ್ತಿ, ಮಕ್ಕಳು ಜೀವಕಳೆದುಕೊಂಡಾರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೈತ ತಮ್ಮ ಅಳಲು
ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.