ಕಲಬುರ್ಗಿ: ಬಡ ಮಕ್ಕಳಿಗೆ ಭಕ್ತರಿಗೆ ವಿದ್ಯಾದಾನ, ಅನ್ನದಾನ ನೀಡುವ ಮೂಲಕ ರಾಜ್ಯದ ಮಠಗಳು ಒಂದು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿವೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾತಿ, ಮತವನ್ನು ಪರಿಗಣಿಸದೇ ಮಠಗಳಿಗೆ ಅಗತ್ಯ ನೆರವು ನೀಡಿದ್ದಾರೆ. ಅದು ಮುಂದುವರಿಯಲಿದೆ ಎಂದು ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭರವಸೆ ನೀಡಿದರು.
ನಗರದ ಸೇಡಂ ರಸ್ತೆಯ ಹಾರಕೂಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿವಾಚಾರ್ಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಮತದಾರರ ಬೆಂಬಲದ ಜೊತೆಗೆ ಹರ ಗುರು ಚರ ಮೂರ್ತಿಗಳ ಆಶೀರ್ವಾದದಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಾಡಿನ ಮಠಾಧೀಶರು ಯಡಿಯೂರಪ್ಪ ಅವರೊಂದಿಗೆ ನಿಂತಿದ್ದರಿಂದಲೇ ರಾಜ್ಯದ ಬಡವರ ಕಣ್ಣೀರು ಒರೆಸಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಶಿವಾಚಾರ್ಯರ ಸಂಸ್ಥೆಗೆ ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಸರ್ಕಾರಿ ನಿವೇಶನ ಕೊಡಿಸಬೇಕು ಎಂದು ವಿಜಯೇಂದ್ರಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಮೊದಲೇ ನನ್ನನ್ನು ಸೂಪರ್ ಸಿ.ಎಂ. ಎಂದು ಕೆಲವರು ಕರೆಯುತ್ತಾರೆ. ಆದ್ದರಿಂದ ನಿವೇಶನ ಕೊಡಿಸುವ ಬಗ್ಗೆ ಯಾವುದೇ ಭರವಸೆ ನೀಡುವುದಿಲ್ಲ. ಆದರೆ, ಈ ಮನವಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲುಪಿಸುತ್ತೇನೆ ಎಂದರು.
ವೇದಿಕೆಯಲ್ಲಿ ಶಖಾಪುರ ಮಠದ ಸಿದ್ದರಾಮ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಎಡೆಯೂರು ರೇಣುಕ ಶಿವಾಚಾರ್ಯರು, ಸಿಂದಗಿ ಸಾರಂಗಮಠದ ಶ್ರೀಗಳು, ಕಡಗಂಚಿ ವೀರಭದ್ರ ಶಿವಾಚಾರ್ಯರು, ಕುಪುರ ಏತೇಶ್ವರ ಶಿವಾಚಾರ್ಯರು, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಮಾಗಣಗೇರಿ ವಿಶ್ವರಾಧ್ಯ ಶಿವಾಚಾರ್ಯರು, ಹೊಟಗಿ ಮಲ್ಲಿಕಾರ್ಜುನ ಶಿವಾಚಾರ್ಯರು, ಸೊಲ್ಲಾಪುರದ ಬ್ರಹ್ಮನಮಡು ಶ್ರೀಗಳು, ಚಿಟಗುಪ್ಪ ಶ್ರೀಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.