ಬೇಲೂರು: ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗೆ ಇಲ್ಲಿನ ಭಕ್ತರು 108 ಕೆಜಿ ಬೆಳ್ಳಿಯನ್ನು ಬಳಸಿ ತುಲಾಭಾರ ಮಾಡಿದರು.
ಬಾಲಗಂಗಾಧರನಾಥ ಸ್ವಾಮೀಜಿಯ ಸಂಸ್ಮರಣೋತ್ಸವದ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಪೀತಾಂಬರ, ಕಂಠಿಹಾರ ಮತ್ತು ಕಿರೀಟವನ್ನು ತೊಡಿಸಿ ತುಲಾಭಾರದ ತಕ್ಕಡಿಯಲ್ಲಿ ಕೂರಿಸಲಾಯಿತು. ಮೊದಲಿಗೆ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಬೆಳ್ಳಿಯ ಗಟ್ಟಿಗಳನ್ನು ತಕ್ಕಡಿಗೆ ಹಾಕಿದರು. ನಂತರ ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಬೆಳ್ಳಿಯನ್ನು ಹಾಕಿದರು.
ಬಳಿಕ ತುಲಾಭಾರಕ್ಕೆ ಬೆಳ್ಳಿಯನ್ನು ನೀಡಿದ್ದ ಭಕ್ತ ವೃಂದ ಬೆಳ್ಳಿಯ ಗಟ್ಟಿಗಳನ್ನು ತಕ್ಕಡಿಗೆ ಹಾಕಿದರು. ಬಳಿಕ ಬೆಳ್ಳಿಯ ಗಟ್ಟಿಗಳಿದ್ದ ತಕ್ಕಡಿ ಕೆಳಕ್ಕೆ ಹೋಗಿ ನಿರ್ಮಲಾನಂದನಾಥರಿದ್ದ ತಕ್ಕಡಿ ಮೇಲೆ ಬಂತು. ಆಗ ಆದಿ ಚುಂಚನಗಿರಿ ಮಠದ ವಿವಿಧ ಸ್ವಾಮೀಜಿಗಳು ನಿರ್ಮಲಾನಂದನಾಥರಿಗೆ ಆರತಿ ಬೆಳಗಿದರು. ಸಾವಿರಾರು ಜನರು ರಜತ ತುಲಾಭಾರವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಸಿಹಿ ತಿಂಡಿಗಳು, ಧವಸ ಧಾನ್ಯಗಳು, ಬಗೆಬಗೆಯ ಹಣ್ಣುಗಳು ಸೇರಿದಂತೆ 108 ಪದಾರ್ಥಗಳನ್ನು ಒಳಗೊಂಡ ನೈವೇದ್ಯವನ್ನು ಅರ್ಪಿಸಲಾಯಿತು. ಬಳಿಕ ವಿವಿಧ ರೀತಿಯ ಹೂವುಗಳಿಂದ ಆದಿಚುಂಚನಗಿರಿ ಶ್ರೀಗಳಿಗೆ ಪುಷ್ಪವೃಷ್ಟಿ ಮಾಡಲಾಯಿತು. ರಜತ ತುಲಾಭಾರ ಸಂದರ್ಭದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಆದಿಚುಂಚನಗಿರಿ ಶಾಖಾಮಠಗಳ ಸ್ವಾಮೀಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.