ಬೆಂಗಳೂರು: ‘ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ. ಎಸ್ಐಟಿಗೆ ಸರ್ವ ಸ್ವತಂತ್ರ ಕೊಟ್ಟಿದ್ದೇವೆ. ಹೀಗಾಗಿ, ಆ ಬಗ್ಗೆ ದಿನಾ ಹೇಳಿಕೆ ಕೊಡುವ ಪ್ರಮೇಯ ಇಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಎಸ್ಐಟಿ ತನಿಖೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದೂ ಹೇಳಿದರು.
ಮೀಸಲಾತಿ ಆಗ್ರಹಿಸಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಯತ್ನಾಳ್ ಜತೆ ಈಗಾಗಲೇ ಮಾತನಾಡಿದ್ದೇನೆ. ಮೀಸಲಾತಿಗೆ ಸಂಬಂಧಿಸಿದಂತೆ ಸಮಿತಿಯನ್ನೂ ರಚಿಸಿದ್ದೇವೆ. ಹೀಗಾಗಿ, ಪ್ರತಿಭಟನೆ ಬೇಡವೆಂದು ಮನವಿ ಮಾಡಿದ್ದೇನೆ. ಮತ್ತೆ ಮಾತನಾಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಈಗಾಗಲೇ ವಸ್ತುಸ್ಥಿತಿಯನ್ನು ವಿಧಾನಸಭೆಯಲ್ಲಿ ಹೇಳಿದ್ದೇನೆ’ ಎಂದರು.
ಕಾಂಗ್ರೆಸ್ಸಿಗರು ಶಿವಮೊಗ್ಗ ಚಲೋ ಹಮ್ಮಿಕೊಂಡಿರುವ ಬಗ್ಗೆ ಅವರು,‘ಪ್ರತಿಭಟನೆ ಮಾಡಲಿ. ಏನಾಗುತ್ತೋ ನೋಡೋಣ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.