ಬೆಂಗಳೂರು: ‘ಆ್ಯಂಬಿಡೆಂಟ್ ಕಂಪನಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಹೆಸರು ಕೇಳಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇ.ಡಿ ಅಧಿಕಾರಿಗಳು, ‘ಆ್ಯಂಬಿಡೆಂಟ್ ಕಂಪನಿ ವಿರುದ್ಧ ನಾವು ಯಾವುದೇ ತನಿಖೆ ನಡೆಸಿಲ್ಲ. ಹೀಗಿರುವಾಗ, ಈ ಪ್ರಕರಣದಲ್ಲಿ ನಿರ್ದೇಶನಾಲಯದ ಹೆಸರು ಏಕೆ ಬಂತೋ ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.
‘ಫರೀದ್ ವಿರುದ್ಧದ ತನಿಖೆ ಮೇಲೆ ಪ್ರಭಾವ ಬೀರಲು ಜನಾರ್ದನರೆಡ್ಡಿ ಡೀಲ್ ನಡೆಸಿದ್ದರು. ಈಗಾಗಲೇ ಇ.ಡಿ ಅಧಿಕಾರಿಯೊಬ್ಬರಿಗೆ ₹ 1 ಕೋಟಿಯನ್ನೂ ಕೊಡಲಾಗಿತ್ತು ಎಂಬ ಮಾಹಿತಿ ಇದೆ. ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಸಿಸಿಬಿ ಹೇಳಿದೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಇ.ಡಿ.ಅಧಿಕಾರಿಯೊಬ್ಬರು, ‘ಫರೀದ್ ಯಾವುದೇ ಏಜೆನ್ಸಿಗೆ ಮಾಹಿತಿ ನೀಡದೆ ಗೋಪ್ಯವಾಗಿ ದುಬೈನಲ್ಲಿ ಒಂದು ಕಂಪನಿ ಪ್ರಾರಂಭಿಸಿದ್ದರು. ಅಲ್ಲಿ ವಿದೇಶಿ ಕರೆನ್ಸಿ ಬದಲಾವಣೆಯ ವಹಿವಾಟು ನಡೆಯುತ್ತಿತ್ತು. ಅದನ್ನು ‘ಫೋರೆಕ್ಸ್ ಟ್ರೇಡಿಂಗ್’ ಎಂದು ಕರೆಯಲಾಗುತ್ತದೆ. ನಾವು ಆ ಕಂಪನಿ ವಿರುದ್ಧ ತನಿಖೆ ನಡೆಸಿದ್ದೆವೋ ಹೊರತು, ಆ್ಯಂಬಿಡೆಂಟ್ ಕಂಪನಿ ವಿರುದ್ಧವಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.