ADVERTISEMENT

ನಿಯಮ ಉಲ್ಲಂಘನೆ: ರೋಹಿಣಿ ಸಿಂಧೂರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 20:14 IST
Last Updated 29 ಜುಲೈ 2022, 20:14 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಿಯಮ ಮೀರಿ ಕೆಲವು ಆದೇಶಗಳನ್ನು ಹೊರಡಿಸಿದ್ದ ಆರೋಪಗಳ ಕುರಿತು ವಿಚಾರಣೆಗೆ ಹಾಜರಾಗುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್ ನೋಟಿಸ್‌ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ 14,71,458 ಬಟ್ಟೆ ಬ್ಯಾಗ್‌ಗಳನ್ನು ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸರಬರಾಜು ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ ಆದೇಶದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ₹13ಕ್ಕೆ ದೊರೆಯುವ ಬ್ಯಾಗ್‌ಗೆ ₹ 52 ನಿಗದಿ ಮಾಡಲಾಗಿತ್ತು. ಅಲ್ಲದೇ, ಸ್ಥಳೀಯ ಸಂಸ್ಥೆಗಳ ಅನುಮೋದನೆ ಪಡೆದಿರಲಿಲ್ಲ. ಪಾರಂಪರಿಕ ಕಟ್ಟಡದ ವ್ಯಾಪ್ತಿಗೆ ಒಳಪಡುವ ಮೈಸೂರು ಜಿಲ್ಲಾಧಿಕಾರಿ ವಸತಿಗೃಹದಲ್ಲಿ ಅನುಮತಿ ಪಡೆಯದೆ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್‌ ನಿರ್ಮಿಸಲಾಗಿತ್ತು ಎಂಬುದೂ ಸೇರಿದಂತೆ ಕೆಲವು ನಿರ್ಧಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಸಾ.ರಾ.ಮಹೇಶ್‌, ಮೈಸೂರು ನಗರ ಪಾಲಿಕೆ ಮಾಜಿ ಉಪ ಮೇಯರ್ ಶೈಲೇಂದ್ರ ವಿ.ಭೀಮರಾವ್ ದೂರು ಸಲ್ಲಿಸಿದ್ದರು.

ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸರ್ಕಾರ ರವಿಶಂಕರ್‌ ಅವರಿಗೆ ಸೂಚಿಸಿತ್ತು. ಇದೇ 30ರಂದು ಬೆಳಿಗ್ಗೆ 11ಕ್ಕೆ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.