ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಪಡಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸುವುದಾಗಿ ಸಿ.ಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನೌಕರರ ಸಂಘದ ಪದಾಧಿಕಾರಿಗಳ ಜತೆ ಮಾತನಾಡಿದ ಅವರು, ಈ ಭರವಸೆ ನೀಡಿದರು.
2006ರ ಬಳಿಕ ಸರ್ಕಾರಿ ನೌಕರಿಗೆ ಸೇರಿರುವವರಿಗೆ ಸರ್ಕಾರದಿಂದ ಪಿಂಚಣಿ ನೀಡುತ್ತಿಲ್ಲ. ನೌಕರರ ವೇತನದಲ್ಲಿ ವಂತಿಕೆ ಕಟಾವು ಮಾಡಿ ಎನ್ಪಿಎಸ್ಗೆ ಸಂದಾಯ ಮಾಡಲಾಗುತ್ತಿದೆ. ಇದನ್ನು ಬದಲಿಸಿ, ಎಲ್ಲ ನೌಕರರಿಗೆ ನೀಡುವ ಸೌಲಭ್ಯವನ್ನೇ ನೀಡಬೇಕು ಎಂದು ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹೋರಾಟವನ್ನೂ ನಡೆಸಿದ್ದಾರೆ. ನೌಕರರ ಆಗ್ರಹಕ್ಕೆ ಮಣಿದ ದೆಹಲಿ ಸರ್ಕಾರ ಎನ್ಪಿಎಸ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲೂ ಎನ್ಪಿಎಸ್ ನೌಕರರ ಸಂಘ ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಿದೆ. ನೌಕರರ ಸಮ್ಮೇಳನದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ‘ನಮ್ಮ ಸರ್ಕಾರ ನೌಕರರ ಪರವಾಗಿದ್ದು, ಎನ್ಪಿಎಸ್ ರದ್ದುಪಡಿಸುವ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದು ಭರವಸೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.