ವಿಧಾನಸೌಧ
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವ ಸಂಬಂಧ ಸರ್ಕಾರಕ್ಕೆ ಸಲಹೆ ನೀಡುವಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಮತ್ತು ಜೆ.ಸಿ.ಮಾಧುಸ್ವಾಮಿ ಸಮಿತಿಯ ವರದಿಗಳ ದತ್ತಾಂಶಗಳನ್ನು ಪರಿಗಣಿಸಬೇಕು’ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯು ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
‘ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವಲ್ಲಿ ವೈಜ್ಞಾನಿಕ ದತ್ತಾಂಶಗಳನ್ನು ಅವಲಂಬಿಸಿರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸದಾಶಿವ ಆಯೋಗದ ವರದಿಯು ದತ್ತಾಂಶಗಳನ್ನು ಆಧರಿಸಿಯೇ ಶಿಫಾರಸು ಮಾಡಿತ್ತು. ಆ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಎರಡೂ ಅಂಗೀಕರಿಸಿವೆ. ಹೀಗಾಗಿ ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳ ಜನಸಂಖ್ಯೆಯನ್ನು ತಿಳಿಯಲು ಈ ವರದಿಯನ್ನೇ ಬಳಸಬಹುದು’ ಎಂದು ವೇದಿಕೆಯ ಅಧ್ಯಕ್ಷ ಎಸ್.ಅರುಣ್ ಕುಮಾರ್ ಕೋರಿದ್ದಾರೆ.
‘ಸದಾಶಿವ ಆಯೋಗದ ವರದಿ ದತ್ತಾಂಶಗಳಿಗೆ ತನ್ನ ದತ್ತಾಂಶಗಳನ್ನು ಸೇರಿಸಿದ್ದ ಮಾಧುಸ್ವಾಮಿ ಸಮಿತಿಯು, ಪರಿಶಿಷ್ಟ ಜಾತಿಗಳ ಮಿಸಲಾತಿಯನ್ನು ಶೇ17 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 7ಕ್ಕೆ ಏರಿಸಬೇಕು ಎಂದು ಶಿಫಾರಸು ಮಾಡಿತ್ತು. ‘ಮಾದಿಗ ಮತ್ತು ಅದರ ಉಪಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ಒದಗಿಸಬಹುದು ಎಂದು ಹೇಳಿತ್ತು. ಅದನ್ನು ಪರಿಗಣಿಸಿ ಮಾದಿಗ ಮತ್ತು ಉಪಜಾತಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.