ಬೆಂಗಳೂರು: ‘ಕನ್ನಡ ರಾಜ್ಯೋತ್ಸವ ದಿನವಾದ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಕರಾಳ ದಿನ ಆಚರಿಸಲು ಸರ್ಕಾರ ಅವಕಾಶ ನೀಡಿದರೆ ಒನಕೆ ಚಳವಳಿ ನಡೆಸಲಾಗುವುದು’ ಎಂದು ಕರ್ನಾಟಕ ನವನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.
‘ಎಂಇಎಸ್ ಸದಸ್ಯರು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ನೀಚ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಸರ್ಕಾರ, ಸ್ಥಳೀಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ರಾಜಕಾರಣಿಗಳ ಒತ್ತಡಕ್ಕೆ ಮಣಿದು, ಕೊನೆಯ ಕ್ಷಣದಲ್ಲಿ ಅನುಮತಿ ನೀಡುವ ಪರಿಪಾಠ ಬೆಳೆಸಿಕೊಂಡು ಬಂದಿವೆ. ರಾಜ್ಯದ ಸ್ವಾಭಿಮಾನ ಕಾಯಬೇಕಾದ ಸರ್ಕಾರವೇ ಇಂಥ ಕೆಲಸಕ್ಕೆ ಅನುಮತಿ ನೀಡುತ್ತಾ ಬಂದಿರುವುದು ನಿಜಕ್ಕೂ ಕನ್ನಡ ಕುಲಕ್ಕೆ ಮಾಡುತ್ತಿರುವ ಅಪಮಾನ’ ಎಂದು ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
‘ನಾಡ ದ್ರೋಹಿಗಳಿಗೆ ಅನುಮತಿ ನೀಡಿದಲ್ಲಿ ನಾವು ಅದೇ ಸ್ಥಳದಲ್ಲಿ ಒನಕೆ ಚಳವಳಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಅವರು ಮೆರವಣಿಗೆ ನಡೆಸುವ ಮಾರ್ಗದಲ್ಲೇ ನಮ್ಮ ಕಾರ್ಯಕರ್ತರು ಕೈಯಲ್ಲಿ ಒನಕೆ ಮತ್ತು ಕನ್ನಡದ ಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಲಿದ್ದಾರೆ. ಅಂದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಅದಕ್ಕೆ ಸರ್ಕಾರ ಮತ್ತು ಬೆಳಗಾವಿಯ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.