ADVERTISEMENT

ಹಂಪಿ ಉತ್ಸವಕ್ಕೆ ಹಣವಿಲ್ಲದಿದ್ದರೆ ಭಿಕ್ಷೆ ಬೇಡಿ ಕೊಡುತ್ತೇವೆ: ಸೋಮಶೇಖರ ರೆಡ್ಡಿ

ವಿಜೃಂಭಣೆಯಾಗಿ ನಡೆಯುವಂತೆ ಶಾಸಕನ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 17:14 IST
Last Updated 2 ಡಿಸೆಂಬರ್ 2018, 17:14 IST
ಜಿ.ಸೋಮಶೇಖರ ರೆಡ್ಡಿ
ಜಿ.ಸೋಮಶೇಖರ ರೆಡ್ಡಿ   

ಬಳ್ಳಾರಿ: ‘ಹಂಪಿ ಉತ್ಸವವನ್ನು ಅದ್ಧೂರಿಯಾಗಿಯೇ ಆಚರಿಸಬೇಕು. ಸರಳವಾಗಿ ಆಚರಿಸುವುದಾದರೆ ಬೇಡ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಜಿಲ್ಲೆಯಾದ್ಯಂತ ಭಿಕ್ಷೆ ಬೇಡಿ ಹಣ ಕೊಡುತ್ತೇವೆ’ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.

‘ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ರದ್ದು ಮಾಡಿರುವುದು ಖಂಡನೀಯ. ಬರಗಾಲವಿದ್ದರೂ ಮೈಸೂರು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ಹಂಪಿ ಉತ್ಸವವನ್ನು ಬಿಟ್ಟರೆ ಹೇಗೆ? ಉತ್ಸವದ ಪರವಾಗಿ ಜಿಲ್ಲೆಯ ಎಲ್ಲಾ ಶಾಸಕರು ಒಕ್ಕೊರಲಿನಿಂದ ಧ್ಚನಿ ಎತ್ತಬೇಕು’ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರಿದ್ದರೂ ಉತ್ಸವದ ಬಗ್ಗೆ ಧ್ವನಿ ಎತ್ತದಿರವುದು ವಿಷಾದನೀಯ. ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶಕ್ಕೆ ಕೋಟಿ–-ಕೋಟಿ ರೂಪಾಯಿ ಖರ್ಚು ಮಾಡಿದೆ. ಉತ್ಸವ ಮಾಡಲು ಅಗುವುದಿಲ್ಲವೇ? ವಿಶ್ವ ಪಾರಂಪರಿಕ ತಾಣಕ್ಕೆ ಗೌರವ ಕೊಟ್ಟು ವಿಜೃಂಭಣೆಯಿಂದ ಆಚರಿಸಲೇಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬರ ಅಧ್ಯಯನ ತಂಡ ಜಿಲ್ಲೆಗೆ ನಾಳೆ: ‘ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಿಜೆಪಿಯ ಮುಖಂಡರಾದ ಜಗದೀಶ್ ಶೆಟ್ಟರ್‌, ಸುರೇಶ್ ಅಂಗಡಿ, ಕರಡಿ ಸಂಗಣ್ಣ, ಹಾಲಪ್ಪ ಆಚಾರ್ ಜಿಲ್ಲೆಗೆ ನ.04ರಂದು ಬರಲಿದ್ದಾರೆ’ ಎಂದು ರೆಡ್ಡಿ ತಿಳಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನ ಗೌಡ ಮಾತನಾಡಿದರು.

ಮುಖಂಡರಾದ ಶ್ರೀನಿವಾಸ್ ಪಾಟೀಲ್, ಜಿ.ವಿರೂಪಾಕ್ಷಗೌಡ, ಮುರಾರಿ ಗೌಡ, ಕೆ.ಎ.ರಾಮಲಿಂಪ್ಪ, ಮಲ್ಲನಗೌಡ, ವೀರಶೇಖರರೆಡ್ಡಿ, ಜಡೇಗೌಡ, ಮೋತ್ಕರ್ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.